Site icon Suddi Belthangady

ನಿಡಿಗಲ್: ಬೈಕ್-ಕಾರು ಡಿಕ್ಕಿ: ಸವಾರನಿಗೆ ಗಾಯ

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಗ್ರಾಮದ ನಿಡಿಗಲ್ ಶಾಲೆಯ ಬಳಿ ಸ್ಕೂಟರ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಉಂಟಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಉಜಿರೆ ಕಡೆಯಿಂದ ಮುಂಡಾಜೆ ಕಡೆ ಆಗಮಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮಿತ್ತಬಾಗಿಲು ಗ್ರಾಮದ ಕಾಜೂರಿನ ಶೇಕಬ್ಬ(72) ಎಂಬವರು ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಅಪಘಾತ ಉಂಟಾದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ರಸ್ತೆ ಅಗಲೀಕರಣ ಸಂದರ್ಭ ಸಾಕಷ್ಟು ಕಲ್ಲು,ಮಣ್ಣು ರಸ್ತೆಗೆ ಬಂದು ಬಿದ್ದಿದೆ.

ಮುಂಡಾಜೆ ಕಡೆಯಿಂದ ಆಗಮಿಸಿದ ಕಾರು ಈ ಕಲ್ಲುಗಳ ಮೇಲೆ ಚಲಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಸಂಪೂರ್ಣ ಬಲಬದಿಗೆ ಚಲಿಸಿ ಮುಂಭಾಗದಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು.ಅಪಘಾತದ ವೇಳೆ ಸ್ಕೂಟರ್ ಸವಾರನ ಹೆಲ್ಮೆಟ್ ಕಾರಿನ ಹಿಂಭಾಗದ ಗಾಜಿಗೆ ಬಡಿದು ಗಾಜು ಪುಡಿಯಾಗಿದೆ.

ಜನರ ಆಕ್ರೋಶ: ಬೆಳ್ತಂಗಡಿ ತಾಲೂಕಿನಾದ್ಯಂತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ.ಇಲ್ಲಿ ಯಾವುದೇ ಮುಂಜಾಗ್ರತೆ ವಹಿಸದೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸುವಂತಹಾಗಿದೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಸಂಬಂಧ ಪಟ್ಟ ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಳ್ಳದ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.ತಾಲೂಕಿನ ರಸ್ತೆಯು ಸಂಪೂರ್ಣ ಧೂಳು ಮಯವಾಗಿದ್ದು ರಸ್ತೆ ಬದಿ ವಾಸಿಸುವ ಮನೆಗಳವರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.ಇದರಿಂದ ಜನರಲ್ಲಿ ಕೆಲವು ಅನಾರೋಗ್ಯ ಲಕ್ಷಣಗಳು ಗೋಚರಿಸತೊಡಗಿವೆ.

Exit mobile version