Site icon Suddi Belthangady

ಯಕ್ಷಧ್ರುವ ಪಟ್ಲ ಬೆಳ್ತಂಗಡಿ ಘಟಕದಿಂದ ಯಕ್ಷ ಸಂಭ್ರಮ-ಸಾಧಕರಿಗೆ ಪ್ರಶಸ್ತಿ ಪ್ರಧಾನ

ಉಜಿರೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಯಕ್ಷ ಸಂಭ್ರಮ 2023 ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸನ್ಮಾನ ಕಾರ್ಯಕ್ರಮ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥ ಬೀದಿಯಲ್ಲಿ ಡಿ.2 ರಂದು ನಡೆಯಿತು.ಇದರ ಅಂಗವಾಗಿ ನಡೆದ ಕಾರ್ಯಕ್ರಮ ಸಭಾ ಅಧ್ಯಕ್ಷತೆಯನ್ನು ಘಟಕದ ಗೌರವ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಮ್ಮು ಕಾಶ್ಮೀರದ ಪವರ್ ಡಿಪಾರ್ಟ್ಮೆಂಟ್ ನ ಪ್ರಿನ್ಸಿಪಾಲ್ ಸೆಕ್ರೆಟರಿ ಹಿರಿಯಡ್ಕದ ರಾಜೇಶ್ ಪ್ರಸಾದ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥಡಾ. ಮೋಹನ್ ಆಳ್ವ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಸಲಹೆಗಾರ ಭುಜಬಲಿ ಧರ್ಮಸ್ಥಳ,ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಸಂಚಾಲಕ ರವಿ, ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ ಶೆಟ್ಟಿ ಲಾಯಿಲ, ಸಂಚಾಲಕ ಕಿರಣ್ ಶೆಟ್ಟಿ, ಕಾರ್ಯದರ್ಶಿ ಶಿಥಿಕಂಠ ಭಟ್, ಕೋಶಾಧಿಕಾರಿ ಆದರ್ಶ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕರಾದ ಉದ್ಯಮಿ ಕೆ. ಮೋಹನ್ ಕುಮಾರ್, ಅರ್ಚನಾ ರಾಜೇಶ್ ಪೈ, ಭರತ್ ಕುಮಾರ್ ಉಜಿರೆ, ಯಕ್ಷಗಾನ ಕ್ಷೇತ್ರದ ಸಾಧಕರಾದ ಭಾಗವತ ಮೋಹನ್ ಬೈಪಡಿತ್ತಾಯ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಕೃಷಿ ಕ್ಷೇತ್ರದ ಸಾಧಕ ಬಿ. ಕೆ. ದೇವರಾವ್ ಅಮೈ ಇವರನ್ನು ಸನ್ಮಾನಿಸಲಾಯಿತು.

22 ಭಜನಾ ತಂಡಗಳ ಕುಣಿತ ಭಜನೆ,ಚಂಡೆ, ಬ್ಯಾಂಡ್,ಕೊಂಬು,ಸ್ಯಾಕ್ಸೋ ಫೋನ್, ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ಉಜಿರೆಯ ಒಶಿಯನ್ ಪರ್ಲ್ ನಿಂದ ಜನಾರ್ದನ ದೇವಸ್ಥಾನದವರೆಗೆ ವೈಭವದ ಮೆರವಣಿಗೆ ಜರಗಿತು.ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಜರಗಿತು.

ಏಕಕಾಲದಲ್ಲಿ 10 ಮಹಿಷಾಸುರರ ಪ್ರವೇಶ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಯಕ್ಷಗಾನ ಪ್ರದರ್ಶನಗಳಿಗೆ ಪ್ರೇಕ್ಷಕರ ಕೊರತೆ ಇರುವ ಇಂದಿನ ಕಾಲದಲ್ಲಿಯೂ 10,000 ಕ್ಕಿಂತ ಅಧಿಕ ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು ಆಗಮಿಸಿದ ಎಲ್ಲಾ ಪ್ರೇಕ್ಷಕರಿಗೆ 21 ಬಗೆಯ ವಿಶೇಷ ಖಾದ್ಯಗಳನ್ನು ಹಲವು ಕೌಂಟರ್ ಗಳ ಮೂಲಕ ಪೂರೈಸಲಾಯಿತು.

Exit mobile version