Site icon Suddi Belthangady

ನಾರಾವಿ: ಭಾರತ ಮಾತಾ ಪೂಜನಾ ಕಾರ್ಯಕ್ರಮ

ನಾರಾವಿ: ಶ್ರೀ ಸೂರ್ಯನಾರಾಯಣ ದೇವಸ್ಥಾನದ ಅನ್ನಛತ್ರದ ಭವನದಲ್ಲಿ ವಿಶ್ವ ಹಿಂದೂ ಪರಿಷತ್ ನಾರಾವಿ ವತಿಯಿಂದ ಘಟಕದ ನೂತನ ಅಧ್ಯಕ್ಷ ಮುರಾರಿ ರಾವ್ ಮತ್ತು ಕಾರ್ಯದರ್ಶಿಗಳಾದ ಹರಿಶ್ಚಂದ್ರ ಪೂಜಾರಿ ಮತ್ತು ತಾರಾನಾಥ ಆಚಾರ್ಯ ಇವರುಗಳ ನೇತೃತ್ವದಲ್ಲಿ ಭಾರತ ಮಾತಾ ಪೂಜನಾ ಕಾರ್ಯಕ್ರಮವು ನ. 26 ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷರಾದ ಭಾಸ್ಕರ ಶಿರ್ಲಾಲು ಇವರು ತನ್ನ ಅಧ್ಯಕ್ಷೀಯ ನುಡಿಯಲ್ಲಿ ವಿಶ್ವ ಹಿಂದೂ ಪರಿಷತ್ ನ ಮಹತ್ವ ಮತ್ತು ಮುಂಬರುವ ಡಿ.10 ರಂದು ಅಳದಂಗಡಿಯಲ್ಲಿ ನಡೆಯಲಿರುವ ಬೃಹತ್ ಹಿಂದೂ ಹೃದಯ ಸಂಗಮ ಸಮಾವೇಶದ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಕೇಂದ್ರ ಬಿಂದು ಪ್ರಖರ ವಾಗ್ಮಿ ಶಿವಪ್ರಸಾದ್ ಮಲೆಬೆಟ್ಟು ಇವರು ತನ್ನ ದಿಕ್ಸೂಚಿ ಭಾಷಣದಲ್ಲಿ ರಾಷ್ಟೀಯ ವಿಚಾರಧಾರೆಗಳನ್ನು ಮತ್ತು ಹಿಂದೂತ್ವದ ಮಹತ್ವದ ಜೊತೆಗೆ ಹಿಂದೂ ಧರ್ಮದ ಸಂಘಟನಾತ್ಮಕ ಮಾಹಿತಿಯನ್ನು ನೀಡಿದರು.

ನ.22 ದಂದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭಾರತಾಂಬೆಯ ವೀರ ಸುಪುತ್ರರಾದ ಕ್ಯಾಪ್ಟನ್ ಪ್ರಾಂಜಲ್ ಸೇರಿದಂತೆ ನಾಲ್ವರು ವೀರಯೋಧರ ಆತ್ಮ ಸದ್ಗತಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ದೇಶಭಕ್ತ ಧರ್ಮ ಬಂಧುಗಳು ಭಾರತ ಮಾತೆಯ ಸಮ್ಮುಖದಲ್ಲಿ ಅಖಂಡ ಭಾರತದ ರಂಗೋಲಿಯ ಮೇಲೆ ಹಣತೆಗಳನ್ನು ಬೆಳಗಿಸಿ ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ಪುಷ್ಪ ನಮನಗಳನ್ನು ಸಲ್ಲಿಸಲಾಯಿತು.

ವಿಹಿಂಪ ನಾರಾವಿ ಘಟಕದ ಅಧ್ಯಕ್ಷರಾದ ಮುರಾರಿ ರಾವ್ ವೈಯಕ್ತಿಕ ದೇಶ ಭಕ್ತಿಗೀತೆ ಹಾಡಿದರು.ಭಾಸ್ಕರ್ ಹೆಗ್ಡೆ ನಾರಾವಿ ಸ್ವಾಗತಿಸಿದರು.ವಿಹಿಂಪ ನಾರಾವಿ ಘಟಕದ ಕಾರ್ಯದರ್ಶಿ ಹರಿಶ್ಚಂದ್ರ ಪೂಜಾರಿ ವಂದಿಸಿದರು.ಅಭಿಜಿತ್ ಜೈನ್ ನಾರಾವಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ವಿಹಿಂಪ ನಾರಾವಿ ಘಟಕದ ಗೌರವ ಸಲಹೆಗಾರರಾದ ರತ್ನಾಕರ ಭಟ್ ಹೊಳೆಹೊದ್ದು, ಜಗತ್ಪಾಲ್ ಜೈನ್ ಬೈರ್ನಡೆ ಗುತ್ತು, ಉದಯ್ ಹೆಗ್ಡೆ, ಸುಧಾಕರ್ ಭಂಡಾರಿ ನಾರಾವಿ ಮತ್ತು ವಿಶ್ವ ಹಿಂದೂ ಪರಿಷತ್ ನಾರಾವಿ ಘಟಕದ ಸದಸ್ಯರುಗಳು ಹಾಗೂ ಅಪಾರ ದೇಶಭಕ್ತ ಹಿಂದೂ ಧರ್ಮ ಬಂಧುಗಳು ಉಪಸ್ಥಿತರಿದ್ದರು.

Exit mobile version