Site icon Suddi Belthangady

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ ಹಾಗೂ ಭಗವದ್ಗೀತಾ ಸ್ಪರ್ಧೆಗಳು

ಬೆಳ್ತಂಗಡಿ: ಶಿರಸಿಯ ಶ್ರೀ ಸರ್ವಜ್ಞೇಂದ್ರ  ಸರಸ್ವತೀ ಪ್ರತಿಷ್ಠಾನ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ಆಶ್ರಯದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ  ಸ್ಪರ್ಧೆಗಳು ನವೆಂಬರ್ 18ರಂದು ಮಧ್ಯಾಹ್ನ 2 ಘಂಟೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ತಾಲೂಕು ಮಟ್ಟದ ಆಯಾ ಸ್ಪರ್ಧೆಯಲ್ಲಿ ವಿಜೇತರಾದ  ಇಬ್ಬರನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಡಿಸೆಂಬರ್ 2 ರಂದು ಜಿಲ್ಲಾ ಮಟ್ಟದ ಸ್ಪರ್ಧೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದೆ.ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ  ಕಂಠಪಾಠಕ್ಕೆ ಶ್ರೀ ಭಗವದ್ಗೀತೆಯ  10 ನೆಯ ಅಧ್ಯಾಯ ಪೂರ್ತಿ ಶ್ಲೋಕಗಳನ್ನು ಹೇಳಲು ಇರುತ್ತದೆ. 

ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಗಳ ವಿವರ ಇಂತಿದೆ: 5 ನೇ ತರಗತಿಯಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಂಠಪಾಠ ಸ್ಪರ್ಧೆಗೆ 10ನೆಯ ಅಧ್ಯಾಯದ ಮೊದಲ 20 ಶ್ಲೋಕಗಳು ಇರುತ್ತವೆ ಹಾಗೂ  ‘ಭಗವದ್ಗೀತೆಯಿಂದ ಜೀವನ ಸಮೃದ್ಧಿ’ ವಿಷಯದಲ್ಲಿ 5 ನಿಮಿಷ ಅವಧಿಯ ಭಾಷಣ ಸ್ಪರ್ಧೆ ನಡೆಯುತ್ತದೆ.

8 ರಿಂದ 10 ನೆಯ ತರಗತಿ ವಿದ್ಯಾರ್ಥಿಗಳಿಗೆ  ಕಂಠಪಾಠ ಸ್ಪರ್ಧೆಗೆ 10 ನೆಯ ಅಧ್ಯಾಯದ ಮೊದಲ 20 ಶ್ಲೋಕಗಳು ಹಾಗೂ ‘ ಭಗವದ್ಗೀತೆಯಿಂದ ಭಾರತಕ್ಕೆ ವಿಶ್ವಮಾನ್ಯತೆ ‘ ವಿಷಯದಲ್ಲಿ 5 ನಿಮಿಷ ಅವಧಿಯ ಭಾಷಣ ಸ್ಪರ್ಧೆ ನಡೆಯುತ್ತದೆ. ಹಾಗೆಯೇ  ಲಿಖಿತ ರಸಪ್ರಶ್ನಾ ಸ್ಪರ್ಧೆ ನಡೆಯಲಿದ್ದು , 20 ನಿಮಿಷಗಳಲ್ಲಿ  30 ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು. 

ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ – ಕಂಠಪಾಠ ಸ್ಪರ್ಧೆಗೆ  10 ನೆಯ ಅಧ್ಯಾಯದ ಮೊದಲ 20 ಶ್ಲೋಕಗಳು ನಿಗದಿಯಾಗಿವೆ ಹಾಗೂ ‘ ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ ‘ ಎಂಬ ವಿಷಯದಲ್ಲಿ   5 ನಿಮಿಷಗಳ ಅವಧಿಯ ಭಾಷಣ ಸ್ಪರ್ಧೆ ನಡೆಯಲಿದೆ.

ಶಾಲಾ / ಕಾಲೇಜು ಮಟ್ಟದ ಸ್ಪರ್ಧೆಯನ್ನು  ಮಾಡಿಸಿ ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರ ಹೆಸರನ್ನು ಸ್ಪರ್ಧಾ ಸಂಯೋಜಕರಿಗೆ ನವೆಂಬರ್ 15 ರ ಒಳಗೆ  ಕೊಡಬೇಕು. 

ಹೆಚ್ಚಿನ ವಿವರಗಳಿಗೆ ಬೆಳ್ತಂಗಡಿ ತಾಲೂಕು  ಶ್ರೀ ಭಗವದ್ಗೀತಾ ಅಭಿಯಾನದ ಸಂಯೋಜಕರಾದ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ  ಡಾ.ಪ್ರಸನ್ನಕುಮಾರ ಐತಾಳ್  9964139855 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version