Site icon Suddi Belthangady

ಏಕಬಳಕೆ ಪ್ಲಾಸ್ಟಿಕ್ ನಿಷೇಧವಾಗಿರುವ ಬಗ್ಗೆ ಧರ್ಮಸ್ಥಳ ಗ್ರಾ.ಪಂ ನಲ್ಲಿ ಪರಿಸರ ಅಧಿಕಾರಿಯವರ ಕಾರ್ಯಾಚರಣೆ ಸಭೆ

ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ಟೋಬರ್ 2 ರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ ಸರಕಾರದ ಆದೇಶದಂತೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗದೊಂದಿಗೆ ಮಂಗಳೂರು ಪರಿಸರ ಅಧಿಕಾರಿ ಅವರ ಉಪಸ್ಥಿತಿಯಲ್ಲಿ ಧರ್ಮಸ್ಥಳ ಗ್ರಾಮದ ಹೋಟೆಲ್, ಜೀನಸು ಅಂಗಡಿ, ಕ್ರೀಮ್ ಪಾರ್ಲರ್, ಮಾಲಕರ ಸಭೆ ನಡೆಸಲಾಯಿತು.

ಹೋಟೆಲ್ ಗಳಲ್ಲಿ ಪಾರ್ಸೆಲ್ ಬಗ್ಗೆ, ದಿನಸಿ ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಸಾಮಾಗ್ರಿಗಳನ್ನು ಪ್ಯಾಕ್ ಮಾಡಲು ಪ್ಲಾಸ್ಟಿಕ್ ಬದಲು ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ತಿಳಿಸಲಾಯಿತು.ಹಾಗೂ ಈ ಬಗ್ಗೆ ಚರ್ಚಿಸಲಾಯಿತು.ವ್ಯಾಪಾರ ಮಳಿಗೆಗಳಿಗೆ ಹಾಗೂ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಕಾರ್ಯಾಚರಣೆ ನಡೆಸುವ ಬಗ್ಗೆ ಚರ್ಚಿಸಲಾಯಿತು.

ಪ್ಲಾಸ್ಟಿಕ್ ಉತ್ಪನ್ನಗಳನ್ನು ಅಂಗಡಿಗಳಿಗೆ ವ್ಯಾಪಾರ ಕೇಂದ್ರಗಳಿಗೆ ನೀಡುತ್ತಿರುವ ಏಜೆಂಟ್ ಗಳ ಮೇಲೆ ನಿಗವಹಿಸಿ ಉತ್ಪನ್ನಗಳನ್ನು ಮುಟ್ಟುಗೋಲು ಹಾಕುವ ಹಾಗೂ ದಂಡನೆ ವಿಧಿಸುವ ಬಗ್ಗೆ ಚರ್ಚಿಸಲಾಯಿತು.

ಜಿಲ್ಲಾಧಿಕಾರಿ ಅವರ ಆದೇಶದಂತೆ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುವಂತೆ ನೀಡಿದ ಆದೇಶದ ಬಗ್ಗೆ ಕೂಡ ಸಭೆಯಲ್ಲಿ ತಿಳಿಸಲಾಯಿತು.ಸರಕಾರದ ಆದೇಶದಂತೆ NO GSR571(E) ರಂತೆ ಪ್ಲಾಸ್ಟಿಕ್ ನಿಷೇಧ ಹಾಗೂ ದಂಡನೆ ನಿಯಮದಂತೆ ಆಮದು, ಸಂಗ್ರಹನೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.ಏಕ ಬಳಕೆಯ ಪ್ಲಾಸ್ಟಿಕ್ ಅಂದರೆ 100 ಮೈಕ್ರೋನಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್, ಪಿಯುಸಿ ಬ್ಯಾನರ್ ಗಳು, ಪ್ಲಾಸ್ಟಿಕ್ ಸ್ಟಿಕರ್ ಗಳು, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಲೋಟಗಳು, ಪ್ಲಾಸ್ಟಿಕ್ ಪ್ಲೇಟ್ ಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್ ಗಳು, ಪ್ಲಾಸ್ಟಿಕ್ ಐಸ್ ಕ್ರೀಮ್ ಸ್ಟಿಕ್ ಗಳು, ಅಲಂಕಾರಿಕಾಗಿ ಬಳಸುವ ಪಾಲಿಸ್ಟೇರಿಯನ್ ಥರ್ಮಕೋಲ್, ಬಲೂನ್ ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್ ಗಳು,ಇವುಗಳ ದಾಸ್ತಾನು ಮಾರಾಟ ಮತ್ತು ಬಳಕೆಯನ್ನು ನಿಷೇಧ ಮಾಡುವಂತೆ ಮತ್ತೊಮ್ಮೆ ಸಭೆಯಲ್ಲಿ ತಿಳಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಪರಿಸರ ಅಧಿಕಾರಿ ಡಾ.ರವಿ ಹಾಗೂ ತಪಾಸಣಾ ತಂಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್.ಕೆ, ಪಂಚಾಯತ್ ಕಾರ್ಯದರ್ಶಿ ದಿನೇಶ್.ಎಂ, ಲೆಕ್ಕ ಸಹಾಯಕರಾದ ಪ್ರಮೀಳಾ, ಹಾಗೂ ವ್ಯಾಪಾರಸ್ಥರು, ನಾಗರಿಕರು ಉಪಸ್ಥಿತರಿದ್ದರು.ಡಾ.ದೇವಿಪ್ರಸಾದ್ ಬೊಲ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Exit mobile version