Site icon Suddi Belthangady

ದೇವರಮನೆ ಪ್ರವಾಸಕ್ಕೆ ತೆರಳಿ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ ಕೊಯ್ಯೂರಿನ ಯುವಕ ಪತ್ತೆ

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಐತಿಹಾಸಿಕ ಹಾಗೂ ಪ್ರವಾಸಿ ತಾಣ ದೇವರ ಮನೆ ಪ್ರವಾಸಕ್ಕೆ ಬಂದಿದ್ದ ಕೊಯ್ಯೂರಿನ ಗ್ರಾಮದ ದೀಕ್ಷಿತ್ (27ವ) ಅಕ್ಟೋಬರ್ 10 ರಂದು ಮಂಗಳವಾರ ಸಂಜೆ ನಾಪತ್ತೆಯಾಗಿದ್ದ. ಇದೀಗ ಆಕ್ಟೋಬರ್ 11 ರಂದು ಬೆಳಗ್ಗೆ ಮನೆಯ ಹತ್ತಿರದ ಮೋರಿಯಲ್ಲಿ ಕುಳಿತಿದ್ದನ್ನು ಊರವರು ಪತ್ತೆ ಹಚ್ಚಿ ಮನೆಗೆ ಸೇರಿಸಿದ್ದಾರೆ.ಪ್ರಕರಣ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅರಂತೊಟ್ಟು ದೀಕ್ಷಿತ್ ಪೂಜಾರಿ, ಸಂಪಾಜೆ ನಿವಾಸಿ ದೀಕ್ಷಿತ್ ಗೌಡ, ಜಾರ್ಲೋಟ್ಟು ನಿವಾಸಿ ಕಿರೋತ್ ಪೂಜಾರಿ, ಅಡೆಂಕಿಲೊಟ್ಟು ನಿವಾಸಿ ಸುದರ್ಶನ್ ಗೌಡ ನಾಲ್ಕು ಜನ ಒಂದೇ ಊರಿನವರಾಗಿದ್ದು ಇವರೆಲ್ಲ ದೇವರಮನೆಗೆ ಕಾರಿನಲ್ಲಿ ಹೋಗಿದ್ದರು.ದೇವರಮನೆಗೆ ಪ್ರವಾಸಕ್ಕೆ ಬಂದಿದ್ದು ಪ್ರವಾಸ ಮುಗಿಸಿ ಹಿಂದಿರುಗುವಾಗ ಕುಡಿದ ಮತ್ತಿನಲ್ಲಿದ್ದ ಯುವಕರ ಮಧ್ಯದಲ್ಲಿ ಗಲಾಟೆ ನಡೆದು ಹೊಡೆದಾಟ ಮಾಡಿಕೊಂಡಿದ್ದರು.ನಂತರ ಕೋಪದಿಂದ ದೀಕ್ಷಿತ್ ಪೂಜಾರಿ ಬೇರೆಯಾಗಿ ಹೋಗಿದ್ದ.ದೇವರ ಮನೆ ಸುತ್ತಮುತ್ತ ಮಂಜು ಕವಿದಿದ್ದರಿಂದ ಹುಡುಕಾಟಕ್ಕೆ ಅಡಚಣೆಯಾಗಿದ್ದು ಇಂದು ಕಾರ್ಯಾಚರಣೆ ಮುಂದುವರೆಸಿದ್ದರು.ಇದೀಗ ಯುವಕ ಬೇರೆ ವಾಹನದ ಮೂಲಕ ಊರಿಗೆ ಮರಳಿ ಪತ್ತೆಯಾಗಿರುವ ಬಗ್ಗೆ ಬಣಕಲ್ ಪೊಲೀಸರಿಗೆ ಮನೆಮಂದಿ ಮಾಹಿತಿ ನೀಡಿದ್ದಾರೆ. ಇನ್ನೂ ಪತ್ತೆಯಾಗಿರುವ ದೀಕ್ಷಿತ್ ಪೂಜಾರಿ ಬಣಕಲ್ ಠಾಣೆಗೆ ಹೋಗಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕಾಗಿದೆ. ಯುವಕರು ಕುಡಿದ ಮತ್ತಿನಲ್ಲಿ ನಡೆದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

Exit mobile version