Site icon Suddi Belthangady

ಕುತ್ಲೂರು: ಜೇನು ಕೃಷಿ ತರಬೇತಿ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರ

ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ ಕುಟುಂಬದ ಸದಸ್ಯರಿಗೆ WCS ಸಂಸ್ಥೆ ಬೆಂಗಳೂರು, ಇವರ ವತಿಯಿಂದ ಜೇನು ಕೃಷಿ ತರಬೇತಿ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರ ಕುತ್ಲೂರು ಮಂಜುಶ್ರೀ ಸಭಾಭವನದಲ್ಲಿ ನಡೆಯಿತು.

ಸುಮಾರು 70 ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಈ ಕಾರ್ಯಕ್ರಮ ಉದ್ಘಾಟಿಸಿ, ಎಲ್ಲರೂ ಈ ತರಬೇತಿ ಪಡೆದು ಜೇನು ಕೃಷಿ ಮಾಡುವಂತೆ ತಿಳಿಸಿದರು.ತೋಟಗಾರಿಕಾ ಇಲಾಖೆಯ ನಿರ್ದೇಶಕರಾದ ಮಹಾವೀರ್ ಮತ್ತು ಅಶ್ವಿನ್ ರವರು ಜೇನು ಕೃಷಿ ಬಗ್ಗೆ ಮಾಹಿತಿ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರಾದ ಹೇಮಚಂದ್ರ ರವರು ಯೋಜನೆಗಳ ಬಗ್ಗೆ ತಿಳಿಸಿದರು.

ಜೇನು ಕೃಷಿಯಲ್ಲಿ ಪ್ರಗತಿಪರ ಕೃಷಿಕರಾದ ಆಲಡ್ಕ ಶ್ಯಾಮಸುಂದರ್ ಭಟ್ ಮಾಹಿತಿ ನೀಡಿ ಅವರ ತೋಟದಲ್ಲಿ ಜೇನು ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.ಇನ್ನೊಬ್ಬ ಪ್ರಗತಿಪರ ಕೃಷಿಕರಾದ ಪ್ರಕಾಶ್ ಜೋಷಿ ಸುಲ್ಕೇರಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಸದಾನಂದ ಗೌಡ, ನಿರ್ದೇಶಕರಾದ ಲಿಂಗಪ್ಪ ಎಂ.ಕೆ, ನಾರಾವಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾಲತಾ, ಸದಸ್ಯರಾದ ಮೀನಾ, ಇಕೋ ಫ್ರೆಶ್ ಎಂಟರ್ ಪ್ರೈಸಸ್ ಮಾಲಕರಾದ ರಾಕೇಶ್ ಹೆಗ್ಡೆ ಉಪಸ್ಥಿತರಿದ್ದರು.WCS ಸಂಸ್ಥೆಯ ಅಧಿಕಾರಿ, ಸಮಾಜ ಸೇವಕರಾದ ರಾಮಚಂದ್ರ ಭಟ್ ಕುಕ್ಕುಜೆ, WCS ಸಂಸ್ಥೆಯಿಂದ ಈ ವರ್ಷ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದು ಮಾದರಿ ಜೀವನ ನಡೆಸುವಂತೆ ಕರೆ ನೀಡಿದರು.ಅಲ್ಲದೆ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದವರಿಗೆ ಧನ್ಯವಾದವಿತ್ತರು. ಕುತ್ಲೂರು ಸ.ಉ.ಪ್ರಾ.ಶಾಲೆಯ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

Exit mobile version