Site icon Suddi Belthangady

ಮುಂಡಾಜೆ: ಪ್ಯಾಕ್ಸ್ ಮಹಾಸಭೆ- ಶೇ.14 ಡಿವಿಡೆಂಟ್

ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಭವನದಲ್ಲಿ ಸೆ.16ರಂದು ನಡೆಯಿತು.ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಸಾಲಿನ ಸಂಘವು 1.85ಕೋಟಿ ರೂ.ಗಿಂತ ಅಧಿಕ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.14 ಡಿವಿಡೆಂಟ್ ನೀಡಲು ನಿರ್ಣಯಿಸಲಾಗಿದೆ ಎಂದು ಹೇಳಿದರು.ಸಂಘದಲ್ಲಿ ಎ ತರಗತಿಯ 6,287, ಸಿ ಮತ್ತು ಡಿ ತರಗತಿ ತರಗತಿಯ 7,711 ಸದಸ್ಯರು ಇದ್ದು 6.15 ಕೋಟಿ ರೂ.ಗಿಂತ ಅಧಿಕ ಪಾಲು ಬಂಡವಾಳ,64.55ಕೋಟಿ ರೂ.ಗಿಂತ ಅಧಿಕ ಠೇವಣಿ ಇದ್ದು ಸದಸ್ಯರಿಗೆ 85.65 ಕೋಟಿ ರೂ.ಗಿಂತ ಅಧಿಕ ಸಾಲ ನೀಡಲಾಗಿದೆ.

ವರ್ಷಾಂತ್ಯಕ್ಕೆ ಶೇ.100 ಸಾಲ ವಸೂಲಾತಿ ಆಗಿರುತ್ತದೆ.ಸಂಘದ ಯಂತ್ರೋಪಕರಣ ಮಳಿಗೆಯಲ್ಲಿ ಕೃಷಿ ಉಪಕರಣ ಖರೀದಿಗೆ ಮಿತ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ ಎಂದು ಹೇಳಿದರು.ಉಪಾಧ್ಯಕ್ಷ ಪ್ರಕಾಶ್ ನಾರಾಯಣ ರಾವ್, ನಿರ್ದೇಶಕರು ಉಪಸ್ಥಿತರಿದ್ದರು.ಸಿಇಒ ಚಂದ್ರಕಾಂತ ಪ್ರಭು ವರದಿ ವಾಚಿಸಿದರು.ನಿವೃತ್ತ ಸಿಇಒ ನಾರಾಯಣ ಫಡಕೆ ಹಾಗೂ ಶಾಖಾ ಪ್ರಬಂಧಕ ಪ್ರಸನ್ನ ಪರಾಂಜಪೆ ಕಾರ್ಯಕ್ರಮ ನಿರೂಪಿಸಿದರು.

ಚರ್ಚೆಯಾದ ವಿಚಾರಗಳು: ಲಾಭಾಂಶದಲ್ಲಿ ಕಟ್ಟಡ ನಿಧಿಗೆ ಶೇ.5 ಹೆಚ್ಚಿಗೆ ಅನುದಾನ ಮೀಸಲು ಇಡುವುದು, ಪಂಚಾಯಿತಿಗೊಂದು ಸಹಕಾರಿ ಸಂಘ ಯೋಜನೆ ಕುರಿತು, ಕಲ್ಮಂಜ ಶಾಖೆಗೆ ಸ್ವಂತ ಕಟ್ಟಡ ರಚನೆ, ಮುಂಡಾಜೆಯ ಸೋಮಂತಡ್ಕದ ಕಟ್ಟಡವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸುವ ಕುರಿತು,ಸಾಲ ತಿರುವಳಿ ಯೋಜನೆ ಚುರುಕುಗೊಳಿಸುವ ವಿಚಾರ, ಸರಕಾರದ ಅನುಮೋದನೆ ಬಂದ ತಕ್ಷಣ ಶೂನ್ಯ ಬಡ್ಡಿ ದರದ ಸಾಲ ಮಿತಿ ರೂ. 5 ಲಕ್ಷಕ್ಕೆ ಏರಿಸುವುದು ಸದಸ್ಯರ ಮರಣ ನಿಧಿಯನ್ನು ರೂ.5,000 ಕ್ಕೆ ಹೆಚ್ಚಿಸುವುದು, ವಿದ್ಯಾರ್ಥಿಗಳಿಗೆ ದತ್ತಿ ನಿಧಿ ವಿತರಣೆಗೆ ಪ್ರತ್ಯೇಕ ದಿನ ನಿಗದಿಪಡಿಸುವುದು, ಗ್ರಾಮೀಣ ಸಂತೆಯನ್ನು ಇನ್ನಷ್ಟು ವಿಸ್ತರಿಸುವುದು ಈ ವಿಚಾರಗಳ ಕುರಿತು ಸದಸ್ಯರಾದ ನಾಮದೇವರಾವ್, ಬಾಬು ಪೂಜಾರಿ, ಅನಂತ ಭಟ್, ಕೊರಗಪ್ಪ ಗೌಡ, ಅನಂತ್ರಾಯ ಚಾರ್ಮಾಡಿ, ವಿಷ್ಣು ಆರ್. ಪಟವರ್ಧನ್ ಮತ್ತಿತರ ಸದಸ್ಯರು ಚರ್ಚೆ ನಡೆಸಿದರು.

ಹಿರಿಯ ಸಹಕಾರಿ ಎನ್.ಎಸ್.ಗೋಖಲೆ ಸ್ಮರಣಾರ್ಥ ದತ್ತಿ ನಿಧಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಆರ್ಥಿಕ ಸಹಕಾರವನ್ನು ನೀಡಲಾಯಿತು.ಸಂಘದ ವೆಬ್ ಸೈಟ್ ನ್ನು ಅನಾವರಣಗೊಳಿಸಲಾಯಿತು.

Exit mobile version