Site icon Suddi Belthangady

ಬೆಳಾಲಿನಲ್ಲಿ ಮೀನುಗಾರಿಕಾ ಮತ್ತು ಕೃಷಿ ಮಾಹಿತಿ ಕಾರ್ಯಾಗಾರ

ಬೆಳಾಲು: ಮೀನುಗರಿಕಾ ಇಲಾಖೆಯ ನೇತೃತ್ವದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಹಾಗೂ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸೆ. 8ರಂದು ತಾಲೂಕಿನ ಪ್ರಥಮ ಸಮಗ್ರ ಮೀನು ಕೃಷಿ ಮತ್ತು ಸಿಹಿ ನೀರಿನ ಮುತ್ತು ಕೃಷಿ ಕಾರ್ಯಾಗಾರ ಹಾಗೂ ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ಬೆಳಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು.

ಬೆಳಾಲಿನ ಶಾಲಿನಿ ಮತ್ತು ತಂಡದವರು ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಮಂಜುಳಾಶ್ರೀ ಶೆಣೈ ಸ್ವಾಗತಿಸಿ, ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಮೀನು ಮತ್ತು ಸಿಹಿ ನೀರಿನ ಮುತ್ತು ಕೃಷಿಯ ಬಗ್ಗೆ ತರಬೇತಿದಾರರಾದ ನವೀನ್ ಐವರ್ನಾಡು ವಿಡಿಯೋ ಪ್ರದರ್ಶನದ ಮೂಲಕ ವಿವರವಾದ ಮಾಹಿತಿ ನೀಡಿದರು.

ಬೆಳ್ತಂಗಡಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಇಲಾಖೆಯ ಸೌಲಭ್ಯಗಳ ಬಗ್ಗೆ ಹಾಗೂ ಕೃಷಿಕರ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ, ಬೆಳಾಲಿನ ಜನರಿಗೆ ಇಲಾಖೆಯೊಂದಿಗೆ ಇರುವ ನಿಕಟ ಸಂಪರ್ಕದ ಬಗ್ಗೆ ತಿಳಿಸಿದರು.

ಅತಿಥಿಗಳಾಗಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಧುರ ಹಾಗೂ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ಕಾರ್ಯಾಗಾರದ ಕುರಿತು ತಮ್ಮ ಅನಿಸಿಕೆ ಹೇಳಿದರು.

ಈ ಕಾರ್ಯಾಗಾರದ ಮುಖ್ಯ ಸಂಯೋಜಕ ಬೆಳಾಲು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುಲೈಮಾನ್ ಬೆಳಾಲು ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಹಾಗೂ ಕೃಷಿಕರು ಅಲ್ಲದೆ ಬೇರೆ ಬೇರೆ ಊರುಗಳಿಂದ ರೈತರು ಭಾಗವಹಿಸಿದ್ದರು.

ಮಂಜುಳಾಶ್ರೀ ಧನ್ಯವಾದ ಸಲ್ಲಿಸಿದರು.

Exit mobile version