Site icon Suddi Belthangady

ಬೆಳ್ತಂಗಡಿ ಸ.ಪ.ಪೂ.ಕಾಲೇಜಿನ ಸುಕುಮಾರ್ ಇವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ

ಬೆಳ್ತಂಗಡಿ: ಸುಕುಮಾರ್ ಇವರು ಪ್ರಾಂಶುಪಾಲರಾಗಿ ಮಾಡಿದ ಅಸಾಧಾರಣ ಸಾಧನೆಗಳು 22.06.2018 ರಂದು ಪುಂಜಾಲಕಟ್ಟೆ ಪದವಿ ಪೂರ್ವ ಕಾಲೇಜಿನಿಂದ ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಸರಕಾರಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಇಲ್ಲಿಗೆ ಕರ್ತವ್ಯಕ್ಕೆ ಸೇರಿದರು.

ಕಳೆದ ಐದು ವರ್ಷಗಳಲ್ಲಿ ಕಾಲೇಜಿನ ಸರ್ವಾಂಗೀಣ ಪ್ರಗತಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಊರ, ಪರವೂರ ಗಣ್ಯರು, ವಿದ್ಯಾಭಿಮಾನಿಗಳು ರೋಟರಿ ಕ್ಲಬ್ ಮತ್ತು ಇತರ ಸಂಘ ಸಂಸ್ಥೆಗಳು, ದಾನಿಗಳು ಹೀಗೆ ಅನೇಕ ಮಹನೀಯರನ್ನು ಸಂಪರ್ಕಿಸಿ ಕಳೆದ 5 ವರ್ಷಗಳಲ್ಲಿ ಅಭೂತಪೂರ್ವ ಪ್ರಗತಿಯಾಗುವಂತೆ ಹಗಲು ರಾತ್ರಿ ಎನ್ನದೆ ಶ್ರಮಿಸಿದವರು.

ಸೋರುತ್ತಿದ್ದ ಎರಡು ತರಗತಿಗಳ ನವೀಕರಣದೊಂದಿಗೆ ಆರಂಭವಾದ ಇವರ ಅಭಿವೃದ್ಧಿ ಕಾಮಗಾರಿಯು ನಂತರದ ದಿನಗಳಲ್ಲಿ ವಿಜ್ಞಾನ ವಿಭಾಗ ಆರಂಭಿಸಿರುವುದು, ಆ ವಿಭಾಗಕ್ಕೆ ಉಪನ್ಯಾಸಕರುಗಳ ಹುದ್ದೆ ಮಂಜೂರು ಮಾಡಿರುವುದು, ಸುಸಜ್ಜಿತವಾಗಿ ವಿಜ್ಞಾನ ಪ್ರಯೋಗಾಲಯಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪವರ್ ಗ್ರಿಡ್, ಸ್ಮಾರ್ಟ್ ಕ್ಲಾಸ್ ರೂಮ್, 12 ತರಗತಿ ಕೊಠಡಿಗಳ ಮಂಜೂರಾತಿಗೆ ಪಟ್ಟ ಪರಿಶ್ರಮ, ಶೌಚಾಲಯ ನಿರ್ಮಾಣ, ಸುಸಜ್ಜಿತ ಕೊಠಡಿಗಳ ವ್ಯವಸ್ಥೆ ಪಾಠೋಪಕರಣಗಳ ವ್ಯವಸ್ಥೆ ಕಂಪ್ಯೂಟರ್ ವ್ಯವಸ್ಥೆ. ಇದಲ್ಲದೆ ಇನ್ನು ಹತ್ತು ಹಲವಾರು ಕಾಮಗಾರಿಗಳನ್ನು ದಾನಿಗಳ ಸಹಕಾರದಿಂದ ನೆರವೇರಿಸಿದ್ದಾರೆ ಇದು ಕಾಲೇಜಿನ ಭೌತಿಕ ಪ್ರಗತಿಯ ಒಂದು ರೂಪವಾದರೆ ಇನ್ನೊಂದು ರೂಪ ಕಾಲೇಜಿನ ಶೈಕ್ಷಣಿಕ ಪ್ರಗತಿಯದ್ದು.

ಕಳೆದ 5 ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ದ್ವಿಗುಣಗೊಳ್ಳುತ್ತಿದ್ದು ಪ್ರಸಕ್ತ ವರ್ಷ 640 ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿ ವಿವಿಧ ಶಾಲೆಗಳಿಗೆ ಪ್ರತಿ ವರ್ಷ ಭೇಟಿ ನೀಡಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಾಗಿರುವುದು ಇವರಿಗೆ ಇನ್ನೊಂದು ಗರಿಮೆ ಮೂಡಿಸಿದೆ. ಎಲ್ಲ ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರುಗಳೊಂದಿಗೆ ಸ್ನೇಹದಿಂದ ವರ್ತಿಸುತ್ತಾ ವಿಶ್ವಾಸ ಗಳಿಸುತ್ತಾ ಅತ್ಯುತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಿದ ವ್ಯಕ್ತಿ ಸುಕುಮಾರ ಇವರು.

ಒಟ್ಟಿನಲ್ಲಿ ಆಡಳಿತಾತ್ಮಕವಾಗಿ ಹಾಗೂ ಶೈಕ್ಷಣಿಕವಾಗಿ ಕಾಲೇಜಿನ ಪ್ರಗತಿಗೆ ಶ್ರಮಿಸಿದ ಶ್ರೀಯುತರಿಗೆ ರಾಜ್ಯಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ನೀಡುತ್ತಿರುವುದು ನಿಜವಾದ ಕಾಯಕಯೋಗಿಗೆ ಅರ್ಥಪೂರ್ಣ ಸನ್ಮಾನವಾಗಿದೆ.

Exit mobile version