Site icon Suddi Belthangady

ಸೌಜನ್ಯ ಪ್ರಕರಣ ಎಸ್.ಐ.ಟಿ.ಗೆ ವಹಿಸಲು ಆಗ್ರಹ: ಅಸಹಜ ಸಾವುಗಳ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಒತ್ತಾಯ- ಆಗಸ್ಟ್ 28ರಂದು ಚಲೋ ಬೆಳ್ತಂಗಡಿ ಮಹಾಧರಣಿ- ಧರ್ಮಸ್ಥಳ ನಾರಾವಿ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಒದಗಿಸಲು ಸಚಿವರಿಗೆ ಮನವಿ ಮಾಡಿದ್ದು ನಾನೇ- ವಸಂತ ಬಂಗೇರ – ಪತ್ರಿಕಾ ಗೋಷ್ಟಿ

ಬೆಳ್ತಂಗಡಿ: 11 ವರ್ಷಗಳ ಹಿಂದೆ ನಡೆದ ಕು.‌ಸೌಜನ್ಯರವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ವಹಿಸಬೇಕು ಮತ್ತು ಅಸಹಜ ಸಾವು ಪ್ರಕರಣಗಳ ತನಿಖೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ವೇದಿಕೆ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆ.28ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ರಾಜ್ಯ ಮಟ್ಟದ ಚಲೋ ಬೆಳ್ತಂಗಡಿ ಮಹಾಧರಣಿ ನಡೆಯಲಿದೆ ಎಂದು ಮಾಜಿ ಶಾಸಕ, ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ಜಂಟಿ ವೇದಿಕೆಯ ದ.ಕ.ಜಿಲ್ಲಾ ಸಮಿತಿಯ ಗೌರವ ಸಂಚಾಲಕ ಕೆ.ವಸಂತ ಬಂಗೇರ ಹೇಳಿದರು. ಅವರು ಆ.26ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಆಗಸ್ಟ್ 28 ರಂದು ರಾಜ್ಯ ಮಟ್ಟದ ಹೋರಾಟ ಬೆಳ್ತಂಗಡಿಯಲ್ಲಿ ಚಲೋ ಬೆಳ್ತಂಗಡಿ ನಡೆಯಲಿದೆ. ಸುಳ್ಳು ಸುದ್ದಿಗಳಿಗೆ, ಸುಳ್ಳು ವದಂತಿಗಳಿಗೆ ಬಲಿಯಾಗದೆ ಸೌಜನ್ಯಾಳ ನ್ಯಾಯದ ನಿರೀಕ್ಷೆಯಲ್ಲಿರುವ ಎಲ್ಲಾ ಜನರು ಬೆಳ್ತಂಗಡಿಗೆ ಬಂದು ಮಹಾ ಧರಣಿಯಲ್ಲಿ ಭಾಗವಹಿಸಬೇಕು ಎಂದು ಈ ಮೂಲಕ ಜನತೆಗೆ ಕರೆ ನೀಡುತ್ತಿದ್ದೇವೆ.ಕರ್ನಾಟಕ ರಾಜ್ಯದ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಕಾರ್ಯಕ್ರಮ ನಡೆಸಲಿರುವುದರಿಂದ ಅದರಲ್ಲಿ ತಾಲೂಕಿನ ಜನಪರ ಸಂಘಟನೆಗಳು, ಸಮಾಜಸೇವಾ ಸಂಘಟನೆಗಳು, ಪ್ರಜ್ಞಾವಂತ ನಾಗರಿಕರು, ರೈತರು, ಕಾರ್ಮಿಕರು, ಶೋಷಿತರು, ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಕರು ದೊಡ್ಡ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇವೆ ಎಂದರು.ಆ.27ರಂದು ಬಿಜೆಪಿ ಪ್ರತಿಭಟನೆಯನ್ನು ಕರೆ ಕೊಟ್ಟಿದ್ದು ಬಿಜೆಪಿಯವರೆ ಆದ ಸಂಸದ ನಳೀನ್ ಕುಮಾರ್, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ, ಸೌಜನ್ಯಳ ಕೊಲೆ 11 ವರ್ಷವಾದರೂ ಏಕೆ ಪಾರ್ಲಿಮೆಂಟಲ್ಲಿ ಪ್ರಸ್ತಾಪ ಮಾಡಲಿಲ್ಲ.ನಾಳೆಯ ಅವರ ಪ್ರತಿಭಟನೆ ಅವರ ರಾಜಕೀಯ ನಾಟಕವಾಗಿ ಕಂಡು ಬರುತ್ತದೆ ಎಂದರು.

ಈ ಹೋರಾಟ ಯಾರಾ ವಿರುದ್ದವೂ ಅಲ್ಲ ನ್ಯಾಯಕ್ಕಾಗಿ ಅನ್ಯಾಯದ ವಿರುದ್ದ ನಮ್ಮ ಹೋರಾಟ ಅಷ್ಟೇ.ಸೌಜನ್ಯ ಪ್ರಕರಣದಲ್ಲಿ ಸರಿಯಾದ ತನಿಖೆ ಆಗಬೇಕು ಅದಕ್ಕಾಗಿ ಈ ಹೋರಾಟ. ಧರ್ಮಸ್ಥಳದಿಂದ ನಾರಾವಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆಗೆ ಆ ಪರಿಸರದ ಸಾರ್ವಜನಿಕರ, ವಿದ್ಯಾರ್ಥಿಗಳ ಮನವಿಗೆ ಸಾರಿಗೆ ಸಚಿವರಿಗೆ ನಾನು ಮನವಿ ಮಾಡಿದ ಪ್ರಕಾರ ಆ.25ರಂದು ಬಸ್ ಸಂಚಾರ ಆರಂಭಿಸಲು ಇಲಾಖೆ ಮಂಜೂರಾತಿ ಕೊಟ್ಟಿತ್ತು.ಆದರೆ ಶಾಸಕರು ಈ ಮಂಜೂರಾತಿ ಮಾಡಿರುವುದು ಎಂದು ಪ್ರಕಟಿಸಿರುವುದರಿಂದ ಇದನ್ನು ರದ್ದುಗೊಳಿಸಿರುತ್ತೇನೆ.ಮುಂದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಈ ಬಸ್ ಸಂಚಾರ ಪ್ರಾರಂಭ ಆಗಲಿದೆ ಎಂದರು.

ಸರ್ವೋದಯ ಕರ್ನಾಟಕ ಪಕ್ಷದ ಆದಿತ್ಯ ನಾರಾಯಣ ಕೊಲ್ಲಾಜೆ ಮಾತನಾಡಿ ಸೌಜನ್ಯ ಹೋರಾಟಕ್ಕೆ ರೈತ ಸಂಘಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.ಸಿಪಿಎಮ್ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ ಅಸಹಜ ಸಾವುಗಳ ತನಿಖೆಗೆ ಒತ್ತಾಯಿಸಿ ಜನಪರ ಸಂಘಟನೆಗಳ ಹೋರಾಟ ಮಾಡುತ್ತಿದೆ.ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ.ಜನಪರ ಸಂಘಟನೆಗಳ ಜಂಟಿ ವೇದಿಕೆಯ ಸಂಚಾಲಕ ಬಿ.ಎಮ್.ಭಟ್ ಮಾತಾಡಿ ನಮ್ಮ ಹೋರಾಟ ಯಾವುದೇ ಕ್ಷೇತ್ರದ ವಿರೋಧ ಆಲ್ಲ.ಕೇವಲ ಸೌಜನ್ಯ ಕೊಲೆ ಆರೋಪಿಗಳ ನೈಜ ಪತ್ತೆಗಾಗಿ ಹೋರಾಟ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಭಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ನಾಗೇಶ್ ಕುಮಾರ್ ಗೌಡ, ಸತೀಶ್ ಕಾಶಿಪಟ್ಣ, ದಲಿತ ಸಂಘರ್ಷಣಾ ಸಮಿತಿಯ ನೇಮಿರಾಜ ಕಿಲ್ಲೂರು, ವಸಂತ ಬಿ.ಕೆ, ಜಿ.ಪಂ.ಮಾಜಿ ಸದಸ್ಯರುಗಳಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಜೆಡಿಎಸ್ ಮುಖಂಡ ಧರ್ಮರಾಜ್, ಪ್ರಮುಖರಾದ ಮನೋಹರ್ ಕುಮಾರ್ ಇಳಂತಿಲ, ಸಂತೋಷ್ ಡಿ.ಸಿ, ಜಯವಿಕ್ರಮ್ ಕಲ್ಲಾಪು, ನ್ಯಾಯವಾದಿ ಸಂತೋಷ್, ಬೊಮ್ಮಣ್ಣ ಗೌಡ ಪುದುವೆಟ್ಟು ಉಪಸ್ಥಿತರಿದ್ದರು.

Exit mobile version