Site icon Suddi Belthangady

ಶ್ರೀ ಧನ್ವಂತರಿ ಕ್ಷೇತ್ರ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ರೂ.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನಾ ನಕ್ಷೆ- 2024 ಮಾರ್ಚ್ ನಲ್ಲಿ ಬ್ರಹ್ಮಕಲಶೋತ್ಸವ-ಪತ್ರಿಕಾಗೋಷ್ಠಿ

ಕೊಕ್ಕಡ ಗ್ರಾಮದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದ್ದು ಸೀಮೆ ದೇವಾಲಯವಾಗಿದ್ದು ಹರಿಹರರ ಸಂಗಮ ಕ್ಷೇತ್ರವಾಗಿದ್ದು ಧನ್ವಂತರಿ ಕ್ಷೇತ್ರವೆಂದು ಪ್ರಸಿದ್ಧಿಯನ್ನು ಹೊಂದಿದೆ.ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯ ಪ್ರಕಾರವಾಗಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳನ್ನು ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಇವರ ಗೌರವಾಧ್ಯಕ್ಷತೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಧಾಕೃಷ್ಣ ಯಡಪ್ಪಾಡಿತ್ತಾಯರ ಅಧ್ಯಕ್ಷತೆಯೊಂದಿಗೆ 2020ನೇ ಫೆಬ್ರವರಿಯಲ್ಲಿ ರಚಿಸಿದ ಜೀರ್ಣೋದ್ದಾರ ಸಮಿತಿಯು ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ನಿಧಿ ಸಮರ್ಪಣೆಯೊಂದಿಗೆ ಪ್ರಾರಂಭಿಸಿರುತ್ತದೆ.

ಶ್ರೀ ದೇವಳದ ಅಭಿವೃದ್ಧಿಯನ್ನು ಸುಮಾರು ಅಂದಾಜು ರೂ. 25 ಕೋಟಿ ವೆಚ್ಚದಲ್ಲಿ ಮಾಡುವುದಾಗಿ ಯೋಜನಾ ನಕ್ಷೆ ತಯಾರಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೇ.ಮೂ.ಬಾಲಕೃಷ್ಣ ಕೆದಿಲಾಯ ಹೇಳಿದರು.ಅವರು ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜೀರ್ಣೋದ್ದಾರ ಕಾರ್ಯದಲ್ಲಿ ಶ್ರೀ ವೈದ್ಯನಾಥೇಶ್ವರ ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಶ್ರೀ ವಿಷ್ಣುಮೂರ್ತಿ ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಶ್ರೀ ಗಣಪತಿ ದೇವರ ಗರ್ಭಗುಡಿ, ಶ್ರೀ ಉಳ್ಳಾಲ್ತಿ ಅಮ್ಮನವರ ಗರ್ಭಗುಡಿ, ಶ್ರೀ ಶಾಸ್ತಾರ ದೇವರ ಗರ್ಭಗುಡಿ, ಶ್ರೀ ನೀಲಕಂಠ ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಮಧ್ಯಮಂಟಪ, ಸುತ್ತುಪೌಳಿ, ಮುಷ್ಕರಣಿ, ದೈವಗಳ ನೂತನ ಕಟ್ಟೆಗಳು, ರೂತನ ಧ್ವಜಸ್ತಂಭ, ನೂತನ ರಾಜಗೋಪುರ, ನೂತನ ಪುಷ್ಕರಣಿ, ಅರ್ಚಕರ ವಸತಿ ಗೃಹಗಳು, ಭೋಜನ ಶಾಲೆ ನೂತನ ಬ್ರಹ್ಮರಥ, ರಥಬೀದಿ, ವಿಶ್ರಾಂತಿ ಗೃಹ, ಕಲ್ಯಾಣ ಮಂಟಪ ಮುಂತಾದ ಅನೇಕ ಯೋಜನೆಗಳ ನೀಲನಕ್ಷೆಯನ್ನ ಸಿದ್ಧಪಡಿಸಲಾಗಿದ್ದು ಸಂಪೂರ್ಣ ಶಿಲಾಮಯ ದೇವಳದ ಈ ಎಲ್ಲಾ ಯೋಜನೆಗಳು ಕಾರ್ಯಗತಗೊಳ್ಳುತ್ತಿದೆ.

ಶ್ರೀ ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಅರವತ್ತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶದೊಂದಿಗೆ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.ಪೇಜಾವರ ಶ್ರೀಗಳಿಂದ ನೂತನ ಗರ್ಭಗುಡಿಗೆ ಶಿಲಾನ್ಯಾಸ ನಡೆದು ತಂತ್ರಿಗಳ ನೇತೃತ್ವದಲ್ಲಿ ಪಾದುಕಾನ್ಯಾಸ ಹಾಗೂ ಗರ್ಭನ್ಯಾಸ ಕಾರ್ಯಕ್ರಮ ನಡೆದಿರುತ್ತದೆ.ದೇವಾಲಯದ ಜೀರ್ಣೋದ್ಧಾರದ ಕಾರ್ಯಗಳಿಗೆ ತಗಲುವ ವೆಚ್ಚವನ್ನು ಸೀಮೆಯ ಹಾಗೂ ಊರ ಪರವೂರ ಭಕ್ತರ ಸಹಕಾರ ಮತ್ತು ಸರಕಾರದ ಅನುದಾನ ಪಡೆದು ನಡೆಸುವುದಾಗಿರುತ್ತದೆ.ಈಗಾಗಲೇ ಸರಕಾರದ ವತಿಯಿಂದ ಶಾಸಕ ಹರೀಶ್ ಪೂಂಜರವರ ಪ್ರಯತ್ನದಿಂದ ರೂ.1 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ.ಇನ್ನು ಮು೦ದಕ್ಕೆ ಸೀಮೆಗೆ ಸಂಬಂದ ಪಟ್ಟ ಭಕ್ತರಿಂದ ನಿಧಿ ಸಂಗ್ರಹಕ್ಕಾಗಿ ಪ್ರತ್ಯೇಕವಾದ ಸಮಿತಿಗಳನ್ನು ರಚಿಸಲಾಗಿದೆ.2024 ನೇ ಮಾರ್ಚ್ ತಿಂಗಳಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಸುವುದಾಗಿ ಸಂಕಲ್ಪಿಸಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪವಿತ್ರಪಾಣಿ ರಾಧಾಕೃಷ್ಣ ಎಡಪಡಿತ್ತಾಯ, ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಸುಬ್ರಹ್ಮಣ್ಯ ಉಪ್ಪರ್ಣ, ಉಪಾಧ್ಯಕ್ಷ ಕುಶಾಲಪ್ಪ ಗೌಡ ಪುಡಿಕೆತ್ತು ಉಪಸ್ಥಿತರಿದ್ದರು.

Exit mobile version