Site icon Suddi Belthangady

ಬೆಳಾಲು: ಮಾಯ ಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳಾಲು: ಇಲ್ಲಿನ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟ ಶಾಲಾ ಆವರಣದಲ್ಲಿ, ದೇಶಾಭಿಮಾನಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುರೇಂದ್ರ ಗೌಡ ಸುರುಳಿಯವರು ಧ್ವಜಾರೋಹಣ ನೆರವೇರಿಸಿದರು.ನಂತರ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ರಾಷ್ಟ್ರ ನಾಯಕರನ್ನು ಸ್ಮರಿಸಿ ಪ್ರಸ್ತುತ ರಾಷ್ಟ್ರ ನಾಯಕರಾಗಿ ದೇಶವನ್ನು ಜವಾಬ್ಧಾರಿಯಿಂದ ಮುನ್ನಡೆಸುತ್ತಿರುವ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಕಾರ್ಯಗಳನ್ನು ಶ್ಲಾಘಿಸಿ ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಭಾರತವನ್ನು ಬೆಳೆಸಲು ನಾವೆಲ್ಲರೂ ದೇಶಕ್ಕಾಗಿ ದುಡಿಯಬೇಕೆಂದು ಕರೆ ನೀಡಿದರು.

ನಂತರ ದಾನಿಗಳಾದ ದೇವಿಪ್ರಸಾದ್ ರವರ ನೆರವಿನಿಂದ ನೆಲಹಾಸು (ಟೈಲ್ಸ್) ಹಾಕಲಾಗಿದ್ದ ಕೊಠಡಿಯನ್ನು ಬೆಳಾಲು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊಟ್ಟ ಮೊದಲಬಾರಿಗೆ ಮಾಯಾ ಶಾಲೆಯಲ್ಲಿ ಸ್ವಾತಂತ್ಯ್ರೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅತೀವ ಸಂತೋಷ ತಂದಿದೆ ಎಂದು ಹೇಳಿ ಮಾಯ ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕ ಸಾಧನೆಯನ್ನು ಸುದ್ದಿಯಲ್ಲಿ ಗಮನಿಸಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶಾಲೆಯ ಅಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ದಾನಿಗಳಾದ ಶ್ರೀ ದೇವಿಪ್ರಸಾದ್ ಹಾಗೂ ಅವರ ದಂಪತಿಗಳನ್ನು ಅತ್ಯಂತ ಅಭಿಮಾನಪೂರ್ವಕವಾಗಿ ಗೌರವಿಸಲಾಯಿತು.

ಈ ಸಭಾ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯಂತಿ, ಸದಸ್ಯರಾದ ಶ್ರೀಮತಿ ಪ್ರೇಮ, ಯೋಗಗುರುಗಳಾದ ಬಾಲಕೃಷ್ಣರವರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಭವಾನಿ , ವಿದ್ಯಾರ್ಥಿ ನಾಯಕ ರತೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ರಶ್ಮಿ ಪ್ರಾರ್ಥನೆ ಮಾಡಿದರೆ, ಮುಖ್ಯಶಿಕ್ಷಕರಾದ ವಿಠಲ್ ಎಂ ಇವರು ಸ್ವಾಗತಿಸಿದರು.8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಮೋಕ್ಷಿತ ಎಲ್ಲರನ್ನೂ ವಂದಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅಂಕಿತ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳವಳಿಯ ಕುರಿತ ಜಿಪಿಟಿ ಶಿಕ್ಷಕರಾದ ಯೋಗೇಶ್ ಹೆಚ್ ಆರ್ ಭಾಷಣ ಮಾಡಿದರು.ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು ಕೇಳಿಬಂದವು.ಪುಟಾಣಿ ಮಕ್ಕಳ ಭಾಷಣ ಮಾಡಿದರು. ಶಿಕ್ಷಕಿಯರಾದ ಜಾನ್ಸಿ ಸಿ.ವಿ ಹಾಗೂ ಜ್ಯೋತಿ ಎಂ.ಎಸ್ ಹಾಗೂ ಅತಿಥಿ ಶಿಕ್ಷಕರಾದ ಗುರು ಪ್ರಸನ್ನ ಹಾಗೂ ಪ್ರಜ್ಞಾ ಇವರು ಕಾರ್ಯಕ್ರಮದ ಮೇಲ್ವಿಚಾರಣೆ ನೋಡಿಕೊಂಡರು.

Exit mobile version