Site icon Suddi Belthangady

ಪುಂಜಾಲಕಟ್ಟೆ: ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ಸ್ವಾಗತ ವಿದಾಯ

ಪುಂಜಾಲಕಟ್ಟೆ: ನಾವು ಮಾಡುವ ಸೇವೆ ಮೊದಲಿಗೆ ನಮಗೆ ತೃಪ್ತಿಕೊಟ್ಟಾಗ ಮಾತ್ರ ಅದರಲ್ಲಿ ಸಾರ್ಥೈಕ್ಯತೆಯನ್ನು ಸಾಧಿಸಬಹುದು. ಅಂತಹ ಸಾರ್ಥಕತೆಯ ಭಾವ ಇಂದು ನಮ್ಮಲ್ಲಿದೆ. ಈ ಸಂಸ್ಥೆ ನಮಗೆ ಪ್ರತಿಯೊಂದು ವಿಚಾರದಲ್ಲೂ ಸದಾ ಸಹಕಾರವನ್ನು ನೀಡಿದೆ.ಉಪಪ್ರಾಂಶುಪಾಲರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ನೀಡಿರುವ ಸಹಕಾರ ನಮ್ಮ ಬದುಕಿನಲ್ಲಿ ಮರೆಯಲಾಗದ ಕ್ಷಣವಾಗಿದೆ. ಇಲ್ಲಿಯ ವಿದ್ಯಾರ್ಥಿ ಬಳಗವಂತೂ ಸದಾ ಉತ್ಸಾಹದ ಚಿಲುಮೆಗಳು.ಈ ಸಂಸ್ಥೆಯಿಂದ ಇಂದು ಬೀಳ್ಕೊಂಡು ಬೇರೆ ಸಂಸ್ಥೆಗೆ ಕರ್ತವ್ಯಕ್ಕೆ ತೆರಳುತ್ತಿರುವುದು ಅನಿವಾರ್ಯತೆಯಾಗಿದೆ ಎಂದು ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿ ಬೇರೊಂದು ಶಾಲೆಗೆ ವರ್ಗಾವಣೆ ಹೊಂದಿರುವ ಶಿಕ್ಷಕರಿಬ್ಬರು ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಹೇಳಿದರು.

ಕಳೆದ 16 ವರ್ಷಗಳ ನಿರಂತರ ಸೇವೆಗೈದು ಪ್ರಸ್ತುತ ಸ್ವ ಇಚ್ಛಾ ವರ್ಗಾವಣೆ ಬಯಸಿ ಬೆಳ್ತಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಭಾಷಾ ಶಿಕ್ಷಕಿಯಾಗಿ ವರ್ಗಾವಣೆಗೊಂಡಿರುವ ಪದ್ಮಜಾ ಎಮ್ ಹಾಗೂ 8 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಅನಿವಾರ್ಯ ಕಾರಣದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹನುಮಂತ ನಗರ ಪ್ರೌಢಶಾಲೆಗೆ ವರ್ಗಾವಣೆಯಾಗಿ ತೆರಳುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯಕಿರಣ ಕುಮಾರ ಇವರಿಬ್ಬರ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಕರ್ನಾಟಕ ಪಬ್ಲಿಕ್‌ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ನಡೆಯಿತು.

ಸಂಸ್ಥೆಗೆ ಸರಕಾರಿ ಪ್ರೌಢಶಾಲೆ ಪದ್ಮುಂಜದಿಂದ ಆಗಮಿಸಿರುವ ಚಿತ್ರಕಲಾ ಶಿಕ್ಷಕ ಸದಾನಂದ ಬಿರಾದಾರ್, ಸರಕಾರಿ ಪ್ರೌಢಶಾಲೆ ವೇಣೂರಿನಿಂದ ಆಗಮಿಸಿರುವ ಕಲಾ ಶಿಕ್ಷಕ ಭವಾನಿ, ಸರಕಾರಿ ಪ್ರೌಢಶಾಲೆ ಪಡಂಗಡಿಯಿಂದ ಆಗಮಿಸಿರುವ ಹಿಂದಿ ಭಾಷಾ ಶಿಕ್ಷಕಿ ಕುಮುದಾ ಎಮ್, ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯಿಂದ ಆಗಮಿಸಿರುವ ಗಣಿತ ಶಿಕ್ಷಕಿ ಜಯಂತಿ ಕೆ, ಸರಕಾರಿ ಪ್ರೌಢಶಾಲೆ ಕಕ್ಕಿಂಜೆಯಿಂದ ಆಗಮಿಸಿರುವ ದೈಹಿಕ ಶಿಕ್ಷಣ ಶಿಕ್ಷಕ ಮೋಹಾನಂದ ಹಾಗೆಯೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸರಕಾರಿ ಪ್ರೌಢಶಾಲೆ ಶೆಟ್ಟಿಹಳ್ಳಿಯ ವಿಜ್ಞಾನ ಶಿಕ್ಷಕಿ ಕುಮಾರಿ ಸುಧಾ ಮೂಡಬಿದ್ರೆ ಇವರನ್ನು ವೈಶಿಷ್ಟ್ಯಪೂರ್ಣವಾಗಿ ಸ್ವಾಗತಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಪ್ರಾಂಶುಪಾಲ ಉದಯ ಕುಮಾರ್ ಬಿ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ಬೀಳ್ಕೊಡುತ್ತಿರುವ ಶಿಕ್ಷಕರುಗಳಾದ ರಾಧಿಕಾ ನಾಯಕ್, ಶಾಂತಾ ಎಸ್, ಹರಿಪ್ರಸಾದ್ ಆರ್, ಮೋಹಾನಂದ, ಜಯಂತಿ ಕೆ. ಪ್ರವೀಣ್ ಕುಮಾರ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಸುರೇಶ್ ಶೆಟ್ಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಶಾಲಾಭಿವೃದ್ಧಿ ಸದಸ್ಯ ದಿವಾಕರ ಶೆಟ್ಟಿ ಕಂಗಿತ್ತಿಲು ಬೀಳ್ಕೊಡುತ್ತಿರುವ ಶಿಕ್ಷಕರಿಗೆ ಸ್ಮರಣಿಕೆಯೊಂದಿಗೆ ಗೌರವ ಸಲ್ಲಿಸಿದರು.

ಸರ್ವರನ್ನೂ ಗಣಿತ ಶಿಕ್ಷಕ ಗೋಪಾಲ್ ಸ್ವಾಗತಿಸಿ, ವಿಜ್ಞಾನ ಶಿಕ್ಷಕ ನಿರಂಜನ್ ಜೈನ್ ಐ ಧನ್ಯವಾದ ಸಲ್ಲಿಸಿ, ಕಲಾ ಶಿಕ್ಷಕ ಧರಣೇಂದ್ರ ಕೆ. ನಿರೂಪಿಸಿದರು.

Exit mobile version