Site icon Suddi Belthangady

ಮುಂಡಾಜೆ: ಯುವ ಸಾಹಿತಿ ಬೆಂಗಳೂರಿನ ಆಪ್ತಿ ಪಟವರ್ಧನ್ ಅವರು ಬರೆದ ‘ಜರ್ನಿ ಅಂಡರ್‌ದ ಸ್ಕೈ’ ಪುಸ್ತಕ ಬಿಡುಗಡೆ

ಬೆಳ್ತಂಗಡಿ: ಇಂದಿನ‌ ಯುವಕ-ಯುವತಿಯರಲ್ಲಿನ ಸಜ್ಜನಶೀಲತೆ ಹೊರಬರಲು ಹಿರಿಯರ ಆಶೀರ್ವಾದ ಅತ್ಯಗತ್ಯ.ಅಪ್ಪನನ್ನು ಮಗಳ ಕಣ್ಣಲ್ಲಿ ನೋಡುವ ಬಗೆ ಹೇಗೆ ಎಂಬುದನ್ನು ತಿಳಿಯಲು ಈ ಪುಸ್ತಕ ಓದಬೇಕು. ಎಂದು ಪತ್ರಕರ್ತ, ಅನುವಾದಕ ಹುಬ್ಬಳಿಯ ಅನಂತ ಹುದಂಗಜೆ ಹೇಳಿದರು.

ಅವರು ಜು.30 ರಂದು ಮುಂಡಾಜೆ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಯುವ ಸಾಹಿತಿ ಬೆಂಗಳೂರಿನ ಆಪ್ತಿ ಪಟವರ್ಧನ್ ಅವರು ಬರೆದ ಜರ್ನಿ ಅಂಡರ್‌ದ ಸ್ಕೈ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಮುಂಡಾಜೆಯ ವೇದಮೂರ್ತಿ ಶ್ರೀನಿಧಿ ಅಭ್ಯಂಕರ್ ಅವರು ಪವನ್ ಕಾಕತ್ಕರ್ ಅವರು ಸಂಕಲಿಸಿದ ನಿತ್ಯಪೂಜಾ ಪುಸ್ತಕವನ್ನು ಬಿಡುಗಡೆಗೊಳಿಸಿ, ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಪುಸ್ತಕಕ್ಕೆ ಸಾರ್ಥಕತೆ ಬರುತ್ತದೆ. ಮೊಬೈಲ್ ಚಟವನ್ನು ಬದಿಗೊತ್ತಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳೋಣ ಎಂದರು.

ಶಿವಮೊಗ್ಗದ ದೇವಿ ಉಪಾಸಕ ಸಿದ್ದಪ್ಪಾಜಿ‌ ದೊಡ್ಡಮ್ಮ, ಕಿಶೋರ ಪಟವರ್ಧನ್, ರಶ್ಮೀ ಪಟವರ್ಧನ್ ಉಪಸ್ಥಿತರಿದ್ದರು.

ಬೆರಗುಗೊಳಿಸಿದ ಅಷ್ಟಾವಧನ: ಪುಸ್ತಕಗಳ ಬಿಡುಗಡೆಯ ಮೊದಲು ಅವಧಾನಿ ಸೂರ್ಯ ಹೆಬ್ಬಾರ್ ಅವರಿಂದ ಅಷ್ಡಾವಧಾನ ನಡೆಯಿತು. ಶ್ರೀನಿಧಿ ಅಭ್ಯಂಕರ್ ನಿಷೇಧಾಕ್ಷರಿಯಾಗಿ, ಅಕ್ಷಯ ಮರಾಠೆ ಸಮಸ್ಯಾ ಪೂರ್ತಿಕಾರರಾಗಿ, ಅನಿರುದ್ದ ಕಾಕತ್ಕರ್ ದತ್ತಪದಿಯಾಗಿ, ಮಹೇಶ್ ಕಾಕತ್ಕರ್ ಉದ್ದಿಷ್ಟಾಕ್ಷರಿಯಾಗಿ, ದಿನಕರ ಗೋಖಲೆ ಅಪ್ರಸ್ತುತ ಪ್ರಸಂಗಕಾರರಾಗಿ, ಅನಂತ ತಾಮ್ಹನ್ಕರ್ ಆಶುಪದ್ಯಕಾರರಾಗಿ, ರಾಕೇಶ್ ಫಡ್ಕೆ ಕಾವ್ಯವಾಚಕರಾಗಿ, ಆಪ್ತಿ ಪಟವರ್ಧನ್ ಸಂಖ್ಯಾಬಂಧಕರಾಗಿದ್ದರು.ಸುಮಾರು ಮೂರುಗಂಟೆಗಳ ಕಾಲ ನಡೆದ ಜಾಣ್ಮೆಯ, ಕುಶಲತೆಯ ಅಷ್ಟಾವಧಾನವು ಶ್ರೋತೃಗಳ ಬೌದ್ಧಿಕ ವೃದ್ಧಿಗೆ ಕಾರಣವಾಯಿತು.
ವಕೀಲ ಶೈಲೇಶ್ ಠೋಸರ್ ಸ್ವಾಗತಿಸಿದರು. ನಾರಾಯಣ ಫಡ್ಕೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version