Site icon Suddi Belthangady

ಬೆಳಾಲು ಶ್ರೀ ಧ.ಮ.ಪ್ರೌಢ ಶಾಲೆಯಲ್ಲಿ ಆಟಿದ ಕೂಟ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆಟಿ ಕೂಟ ಜರಗಿತು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ಉಜಿರೆ ಶ್ರೀ ಧ ಮಂ ಸೆಕೆಂಡರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಕಲಾವತಿಯವರು ಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ನಮ್ಮ ಹಬ್ಬಗಳೆಲ್ಲ ಪ್ರಕೃತಿ ಮತ್ತು ಮನುಷ್ಯರನ್ನು ಬೆಸೆಯುವ ಕೊಂಡಿಗಳು.ಅದರಲ್ಲೂ ತುಳುನಾಡಿನ ಆಟಿ ತಿಂಗಳು ಸಮೃದ್ಧವಾದ ಪರಿಸರದ ಅನುಭವವನ್ನು ನೀಡುವ ಮೌಲಿಕ ಆಚರಣೆಯಾಗಿದೆ.ಪ್ರಸ್ತುತ ನಗರೀಕರಣದ ಸಂಸ್ಕೃತಿಯಿಂದಾಗಿ ಮರೆಯಾಗುತ್ತಿರುವ ಜೀವನ ಮೌಲ್ಯಗಳನ್ನು ಪುನಃಸ್ಥಾಪಿಸಲು ಆಟಿಯಂತಹ ಆಚರಣೆಗಳು ಮಕ್ಕಳಿಗೆ ವಿಶಿಷ್ಟವಾದ ಬದುಕಿನ ಅನುಭವ ನೀಡುವಂತವುಗಳು ಮತ್ತು ಜೀವನ ಪಾಠಗಳು ಎಂದು ಅಭಿಪ್ರಾಯಪಟ್ಟರು.

ಇತರ ಅತಿಥಿಗಳಾಗಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶೇಖರ್ ಕೊಲ್ಲಿಮಾರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲರವರು ಆಗಮಿಸಿದ್ದು, ವೇದಿಕೆಯಲ್ಲಿ ಶಿಕ್ಷಕ ಸಿಬ್ಬಂದಿಗಳೆಲ್ಲರು ಹಾಜರಿದ್ದರು

ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿಗಳಾದ ಇಂದುಮತಿ ಮತ್ತು ಶರಣ್ಯರವರು ಆಟಿ ಮಹತ್ವ ಮತ್ತು ಔಷಧೀಯ ಸಸ್ಯಗಳ ಪರಿಚಯ ಮಾಡಿದರು. ಕಾರ್ಯಕ್ರಮದ ಮಾರ್ಗದರ್ಶಕ ರವಿಚಂದ್ರ ಜೈನ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮಗಳು ಪೂರ್ತಿಯಾಗಿ ವಿದ್ಯಾರ್ಥಿಗಳ ಸಂಯೋಜನೆಯಲ್ಲಿ ಜರಗಿದ್ದು ಲಿಖಿತಾ ಸ್ವಾಗತಿಸಿ,ಮನೋಜ್ ವಂದಿಸಿದರು, ಅಮೂಲ್ಯ ಮತ್ತು ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು.ಸಭೆಯ ನಂತರ ಮಕ್ಕಳಿಂದ ಜಾನಪದ ನೃತ್ಯ, ಹಾಡು, ಕರುಂಗೋಲು ನೃತ್ಯ, ಆಟಿ ಕಳಂಜದಂತಹ ವಿಶಿಷ್ಟ ಕಲಾಪ್ರಕಾರಗಳ ಪ್ರದರ್ಶನ ನಡೆಯಿತು.ಜೊತೆಗೆ ವೈವಿಧ್ಯಮಯವಾದ ಆಟಿಯ ತಿಂಡಿಗಳ ತಯಾರಿ ಹಾಗೂ ಸಾಮೂಹಿಕ ಭೋಜನ ಕೂಟ ಜರಗಿತು.

Exit mobile version