Site icon Suddi Belthangady

ಉಜಿರೆ: ಶ್ರೀ.ಧ.ಮಂ.ಪ.ಪೂ.ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ಸಂಗೀತ ದಿನಾಚರಣೆ: ದೈಹಿಕ ಹಾಗೂ ಮಾನಸಿಕ ಶ್ರೇಯೋಭಿವೃದ್ಧಿಗೆ ಯೋಗ ಅತಿಮುಖ್ಯ – ಪ್ರಮೋದ್ ಕುಮಾರ್

ಉಜಿರೆ: ಪತಂಜಲಿ ಪ್ರಣೀತ ಯೋಗವು ಈಗ ವಿಶ್ವ ಯೋಗ ದಿನದ ಮೂಲಕ ವಿಶ್ವವ್ಯಾಪಿಯಾಗಿ ಜನಮನ್ನಣೆ ಗಳಿಸಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ. ಯಾವುದೇ ವರ್ಗ , ಧರ್ಮ ಹಾಗೂ ಜಾತಿಗಳಿಗೆ ಅತೀತವಾಗಿ ಇರುವುದೇ ಈ ಯೋಗ ವಿದ್ಯೆ. ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಶ್ರೇಯೋಭಿವೃದ್ಧಿಗೆ ಯೋಗ ಅತಿಮುಖ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಹೇಳಿದರು.

ಇವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ವಿಶ್ವ ಯೋಗ ಹಾಗೂ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮನ್ನು ಶಾಂತತೆಗೆ ಕೊಂಡೊಯ್ಯಲು ಸಂಗೀತ ಮುಖ್ಯ.ಭಾರತೀಯ ಸಂಗೀತ ಸರ್ವಶ್ರೇಷ್ಠವಾಗಿದೆ.ಸಂಗೀತದಿಂದ ಆತ್ಮತೃಪ್ತಿ ಹೊಂದಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಪುಟ್ಟಸ್ವಾಮಿ ನೇತೃತ್ವದಲ್ಲಿ ಸ್ವಯಂ ಸೇವಕರಿಂದ ಯೋಗ ನಡೆಯಿತು.ಪ್ರಸೀದಾ ರಾವ್, ಸಿಂಧೂರ ಶೆಂಡೈ ಹಾಗೂ ಶ್ರೀಲತಾ ಅವರು ಕರ್ನಾಟಕ ಸಂಗೀತ ಕಛೇರಿ ನಡೆಸಿದರು.
ಅಕ್ಷತಾ ಎಂ.ಜಿ ಸ್ವಾಗತಿಸಿ, ಸುದರ್ಶನ ನಾಯಕ್ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

Exit mobile version