Site icon Suddi Belthangady

ಟ್ರಕ್ಕಿಂಗ್ ಗೆ ಬಂದು ದಾರಿ ತಪ್ಪಿದ ಬೆಂಗಳೂರಿನ ಯುವಕ ಕಾಡಿನಲ್ಲಿ ಪತ್ತೆ

ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬಂಡಾಜೆ ಫಾಲ್ಸ್ ಕಡೆ ಟ್ರಕ್ಕಿಂಗ್ ಗೆ ಬಂದ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾಗಿ ನಂತರ ಪತ್ತೆಯಾದ ಘಟನೆ ಮೇ.28 ರಂದು ನಡೆದಿದೆ.
ಬೆಂಗಳೂರು ಜೆಪಿ ನಗರದ ಪರೋಸಾ ಅಗರ್ವಾಲ್ ಎಂದು ಹೇಳಲಾಗಿರುವ ಯುವಕ ರಾಣಿಝರಿ ಸಮೀಪದವರೆಗೆ ಬೈಕ್ ನಲ್ಲಿ ಬಂದಿದ್ದು ಇಲ್ಲಿಂದ ಬಂಡಾಜೆ ಫಾಲ್ಸ್‌ ನ ಬದಿಯಿಂದ ಟ್ರೆಕ್ಕಿಂಗ್ ನಡೆಸಲು ಮುಂದಾಗಿದ್ದಾನೆ. ಆದರೆ ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿದ್ದು ಬೆಂಗಳೂರಿನ ಯುವಕನಿಗೆ ಕರೆ ಮಾಡಿ ದಾರಿ ತಪ್ಪಿರುವ ವಿಷಯ ತಿಳಿಸಿ ಆ ಯುವಕ ಚಾರ್ಮಾಡಿಯ ಹನೀಫ್ ರವರಿಗೆ ತಿಳಿಸಿ ಅವರ ತಂಡದ ಜೊತೆ ಹುಡುಕಾಟ ನಡೆಸಿದ್ದಾರೆ. ಆದರೆ ಆತನಿರುವ ಸ್ಥಳ ಪತ್ತೆ ಹಚ್ಚಲು ಕಷ್ಟದ ಪರಿಸ್ಥಿತಿಯಾಗಿತ್ತು. ಇಲ್ಲಿನ ಪರಿಸರದಲ್ಲಿ ಮೊಬೈಲ್ ನೆಟ್ ವರ್ಕ್ ಸಿಗದಿರುವುದು, ಸಂಪೂರ್ಣ ಅರಣ್ಯ ಪ್ರದೇಶವಾದ ಕಾರಣ ಹಾಗೂ ಜಾರುವ ಬಂಡೆಗಳು ಇರುವುದರಿಂದ ಈತ ಇರಬಹುದಾದ ನಿಗದಿತ ಸ್ಥಳ ಹುಡುಕಲು ಹರಸಾಹಸ ಪಡಬೇಕಾಯಿತು.
ಬಂಡಾಜೆ ಫಾಲ್ಸ್‌ ನ ತಳ ಹಾಗೂ ಇತರ ಕೆಲವು ಭಾಗಗಳು ದ.ಕ ಜಿಲ್ಲೆ ವ್ಯಾಪ್ತಿಯಲ್ಲಿದ್ದು ಸ್ಥಳೀಯರಾದ ಸಿನಾನ್ ಚಾರ್ಮಾಡಿ, ಮುಬಾಶಿರ್,ಅಶ್ರಫ್, ಕಾಜೂರಿನ ಸಂಶು, ನಾಸೀರ್ ಕಾಜೂರ್, ಹುಡುಕಾಟ ನಡೆಸಿದ್ದರು.

ಪ್ರದೇಶವು ಸಂಪೂರ್ಣ ಕತ್ತಲ ಪರಿಸರ ಹಾಗೂ ಕಾಡಾನೆ ಸಹಿತ ಇತರ ವನ್ಯಜೀವಿಗಳು ಸಂಚರಿಸುವ ಸ್ಥಳವಾಗಿದ್ದು ಹಲವು ರೀತಿಯ ಅಪಾಯಗಳ ಮಧ್ಯೆ ಹುಡುಕಾಟ ನಡೆಸಲಾಗಿತ್ತು.

ಆಗಾಗ ಮೊಬೈಲ್ ಕರೆಗೆ ಸಿಗುತ್ತಿರುವ ಯುವಕನಿಗೆ ಪೊಲೀಸರು ಮತ್ತು ಅರಣ್ಯ ಇಲಾಖೆ, ಧೈರ್ಯ ತುಂಬಿ, ಹುಡುಕಾಟ ಮುಂದುವರಿಸಿದ್ದರು.ರಾತ್ರಿ ಚಾರ್ಮಾಡಿ ವ್ಯಾಪ್ತಿಯ ಸ್ಥಳೀಯರಾದ ಸಿನಾನ್ ಚಾರ್ಮಾಡಿ, ಮುಬಾಶಿ‌, ಅಶ್ರಫ್, ಕಾಜೂರಿನ ಸಂಶು, ನಾಸೀರ್ ಕಾಜೂರ್, ಹುಡುಕಾಟ ನಡೆಸಿ ಪತ್ತೆ ಹಚ್ಚಿದ್ದಾರೆ.

Exit mobile version