Site icon Suddi Belthangady

ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳಿಂದ ವ್ಯವಹಾರ ಮೇಳ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಕಲಿಕೆಯ ಜೊತೆಗೆ ವ್ಯವಹಾರಿಕೆ ಜೀವನದ ಕಲಿಕೆಗೆ ಪೂರಕವಾದ ವ್ಯವಹಾರ ಮೇಳ ಇತ್ತೀಚಿಗೆ ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ಜರಗಿತು.
ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಂ ಡಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಕಲಿಕೆಯ ಜೊತೆಗೆ ಜೀವನ ಪಾಠದ ಅನುಭವವನ್ನು ಕಲಿಸುವ ಈ ಕಾರ್ಯವು ತುಂಬಾ ಉತ್ತಮವಾದದ್ದು ಮತ್ತು ಮೌಲ್ಯಯುತವಾದದ್ದು .ಕೇವಲ ಶಿಕ್ಷಣ ಮಾತ್ರ ಸೀಮಿತವಾಗದೆ ತನ್ನ ಜೀವನದ ಕಲಿಕೆಗೂ ಒತ್ತು ನೀಡುವಂತಿರಬೇಕು.ಆಗ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಗು ಜೀವನದ ಮೌಲ್ಯಗಳನ್ನು ಬೆಳೆಸುವಲ್ಲಿ ಸಮಾಜದಲ್ಲಿ ತಾನು ಹೇಗೆ ಬದುಕಬೇಕು ,ಹೇಗೆ ವ್ಯವಹರಿಸಬೇಕೆಂಬ ಮೌಲ್ಯವನ್ನು ಇದು ಕಲಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಪಡ್ವೆಟ್ನಾಯ ಮಾತನಾಡಿ ಮಗುವಿನ ಸರ್ವಾಂಗೀಣ ಬೆಳವಣಿಗೆಯ ಜೀವನ ಪಾಠವೂ ಒಂದು. ಹಾಗಾಗಿ ತಾನು ಸಮಾಜದಲ್ಲಿ ಹೇಗೆ ವ್ಯವಹರಿಸಬೇಕು. ತನಗೆ ಅವಶ್ಯವಾದದ್ದು ಯಾವುದು, ಮೌಲ್ಯಯುತವಾದದ್ದು ಯಾವುದು ಎಂದು ತಿಳಿದು ವಸ್ತುವಿನ ಗುಣಮಟ್ಟ,ಪ್ರಾಮುಖ್ಯತೆಗಳನ್ನು ತಿಳಿದು ವ್ಯವಹರಿಸಲು ಈ ಕಾರ್ಯವು ಪೂರಕವಾಗಿದೆ.ಉತ್ತಮ ಬೆಂಬಲ ಹಾಗೂ ಪ್ರತಿಕ್ರಿಯೆ ಪೋಷಕರಿಂದ ಮೂಡಿ ಬಂದಿದೆ ಎಂದರು.
ಹಿರಿಯ ಶಿಕ್ಷಕಿಯರಾದ ಶ್ರೀಮತಿ ಮನೋರಮಾ, ಗಿರಿಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಂ ಡಿ ರವರನ್ನು ಗೌರವಿಸಲಾಯಿತು. ಮಕ್ಕಳ ಪ್ರಾರ್ಥನೆಯ ಬಳಿಕ ಗಿರಿಜಾರವರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಶೇಖರಗೌಡ ಧನ್ಯವಾದವಿತ್ತರು.ದೈಹಿಕ ಶಿಕ್ಷಕ ಸಂಜೀವ ಕೆ ಕಾರ್ಯಕ್ರಮ ಸಂಯೋಜಿಸಿದ್ದರು.ಎಲ್ಲಾ ಶಿಕ್ಷಕರು ಈ ಸಂದರ್ಭ ಉಪಸ್ಥಿತರಿದ್ದರು.
ವ್ಯಾಪಾರ ಮೇಳದಲ್ಲಿ ವಿವಿಧ ಬಗೆಯ ತರಕಾರಿಗಳು, ತೆಂಗಿನ ಕಾಯಿ , ಸಿಯಾಳ ,ಐಸ್ ಕ್ರೀಂ ಗೊಂಬೆಗಳು,ಮಕ್ಕಳಿಗೆ ಬೇಕಾದ ಪೆನ್ನು-ಪುಸ್ತಕ ,ಪೆನ್ಸಿಲ್ ,ರಬ್ಬರ್ ಸಹಿತ ಚುರುಂಬುರಿ ,ಹೋಟೇಲ್ ,ಶರಬತ್‌ಗಳಂತಹ ವೈವಿಧ್ಯಮಯ ಅಂಗಡಿಗಳು ರಾರಾಜಿಸುತ್ತಿದ್ದು ವಿಶೇಷವಾಗಿತ್ತು.

Exit mobile version