Site icon Suddi Belthangady

ಕಾರಿನಲ್ಲಿ 20 ಲಕ್ಷ ರೂ ಸಾಗಾಟ: ಶಿರ್ಲಾಲು ನಿವಾಸಿ ಬಶೀರ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಯಾವುದೇ ದಾಖಲೆಗಳಿಲ್ಲದೆ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 20 ಲಕ್ಷ ರೂಪಾಯಿಗಳನ್ನು ಬೈಂದೂರು ಪೊಲೀಸರು ಶಿರೂರು ಚೆಕ್ ಪೋಸ್ಟಿನಲ್ಲಿ ವಶಕ್ಕೆ ಪಡೆದು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಬಶೀರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣಾ ಉಪನಿರೀಕ್ಷಕ ನಿರಂಜನ ಗೌಡ ಬಿ. ಎಸ್. ಅವರು ಸಿಬ್ಬಂದಿಯೊಂದಿಗೆ ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರು ಗ್ರಾಮದ ಶಿರೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಭಟ್ಕಳ ಕಡೆಯಿಂದ ಬಂದ ಹುಂಡೈ ಕಂಪೆನಿಯ ವೆನ್ಯೂ ಮಾದರಿಯ ನೊಂದಣಿ ಸಂಖ್ಯೆ ಇಲ್ಲದ ಹೊಸ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನ ಹಿಂಬದಿಯ ಸೀಟಿನ ಕೆಳಗೆ ಪ್ಲಾಸ್ಟಿಕ್ ಚೀಲದ ಕಟ್ಟು ಇದ್ದು ಅದರಲ್ಲಿ ಹಣ ಇರುವುದು ಕಂಡು ಬಂದಿದ್ದು ಕಾರಿನ ಚಾಲಕನಲ್ಲಿ ಹಣದ ಬಗ್ಗೆ ಯಾವುದೇ ದಾಖಲೆ ಇರುವ ಬಗ್ಗೆ ವಿಚಾರಿಸಿದ್ದು, ಯಾವುದೇ ದಾಖಲೆ ಇಲ್ಲದಿರುವುದು ತಿಳಿದು ಬಂದಿದೆ.
ನಂತರ ಕಟ್ಟನ್ನು ಬಿಡಿಸಿ ಪರಿಶೀಲಿಸಿದಾಗ 100 ರೂ ಮುಖಬೆಲೆಯ 3000 ನೋಟುಗಳು, 200 ರೂ ಮುಖಬೆಲೆಯ 1000 ನೋಟುಗಳು ಹಾಗೂ 500 ರೂ ಮುಖಬೆಲೆಯ 3000 ನೋಟುಗಳು ಇದ್ದು ಒಟ್ಟು 20 ಲಕ್ಷ ಹಣ ಪತ್ತೆಯಾಗಿದೆ. ಹಣದ ಬಗ್ಗೆ ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ ಮೇರೆಗೆ ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾರಿನ ಚಾಲಕ ಬೆಳ್ತಂಗಡಿ ತಾಲೂಕು ಶಿರ್ಲಾಲು ನಿವಾಸಿ ಬಶೀರ್ (42) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೈಂದೂರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version