Site icon Suddi Belthangady

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಮಹಿಳಾ‌ ಮಂಡಳಿಯಿಂದ ಮಹಿಳಾ ದಿನಾಚರಣೆ

ಬೆಳ್ತಂಗಡಿ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ, ತಾಲೂಕು ಮಹಿಳಾ‌ ಮಂಡಲಗಳ ಒಕ್ಕೂಟ ಬೆಳ್ತಂಗಡಿ, ಮಹಿಳಾ ವೃಂದ ಬೆಳ್ತಂಗಡಿ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳಾ ವೃಂದ ಸಭಾಂಗಣದಲ್ಲಿ ಆಚರಿಸಲಾಯಿತು.

ಇಂದು ಮಹಿಳೆಯರು ತಮ್ಮ ಬದುಕನ್ನು ಆದರ್ಶದಾಯಕವಾಗಿ ನಡೆಸಲು ಶಕ್ತರಾಗಿದ್ದಾರೆ, ಎಲ್ಲಾ ಕ್ಷೇತ್ರದಲ್ಲು ಕೂಡ ತಮ್ಮ ಛಾಪನ್ನು ಮೂಡಿಸಿ ಮಹಿಳೆ ಇಂದು ಸಮಾಜದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡು ಮುನ್ನುಗ್ಗುತ್ತಿದ್ದಾಳೆ, ಇದೇ ರೀತಿ‌ ಮಹಿಳೆ ರಾಜಕೀಯ, ಶೈಕ್ಷಣಿಕ, ಆರ್ಥಿಕ ನೀತಿ, ಕ್ರೀಡೆ ಎಲ್ಲಾ ಕ್ಷೇತ್ರದಲ್ಲು ಚಿಂತನೆಯನ್ನು ಮಾಡಬೇಕೆಂದು ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಮನೋರಮ ಭಟ್ ಅವರು ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನ‌ ಸಾಧಕರಾದ ಹಿರಿಯರು ಶುಶ್ರೂಕಿಯಾಗಿ ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ ನಿವೃತ್ತರಾದರು ತಮ್ಮ‌ ಸೇವೆಯನ್ನು ನೀಡುತ್ತಿರುವ ಶ್ರೀಮತಿ ದೇವಮ್ಮ ಮತ್ತು ಉಜಿರೆ ಬೆನಕ್ ಆಸ್ಪತ್ರೆಯ ಕಿರಿಯ ಸರ್ಜನ್, ಇತ್ತೀಚೆಗೆ ಯಶಸ್ವಿ ಕಿರು ರಂಧ್ರ ಶಸ್ತ್ರಚಿಕಿತ್ಸೆಯ ಮೂಲಕ 1.6 ಕೆ.ಜಿ ಗೆಡ್ಡೆಯನ್ನ ಹೊರತೆಗೆದ ಸಾಧಕಿ ಡಾ.‌ಅಂಕಿತಾ ಭಟ್ ಅವರಿಗೆ ‘ಸ್ಪೂರ್ತಿ -2023’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನಿಕಟಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್ , ಮಹಿಳಾ ವೃಂದದ ಅಧ್ಯಕ್ಷರಾದ ಆಶಾ ಸತೀಶ್ , ಮಹಿಳಾ ಒಕ್ಕೂಟ ಅಧ್ಯಕ್ಷರಾದ ಸವಿತಾ ಜಯದೇವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜೇಸಿಐ ಬೆಳ್ತಂಗಡಿ ಮಂಜುಶ್ರಿಯ ಮಹಿಳಾ ವಿಭಾಗದ ಸಂಯೋಜಕಿ ಮಮಿತಾ ಸುಧೀರ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಜೆಸಿಐ ಅಧ್ಯಕ್ಷರಾದ ಶಂಕರ್ ರಾವ್ ಅತಿಥಿಗಳನ್ನು ಸ್ವಾಗತಿಸಿ, ಹೇಮಾವತಿ.ಕೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಮಧುರಾ ರಾಘವ್ ಜೇಸಿ ವಾಣಿ ವಾಚಿಸಿ, ಸುಭಾಷಿಣಿ‌ ಸನ್ಮಾನ ಪತ್ರ ವಾಚಿಸಿ, ಮಹಿಳಾ ವೃಂದದ ಉಮಾರಾವ್ ಧನ್ಯವಾದವಿತ್ತರು.

ವೇದಿಕೆಯಲ್ಲಿ ಜೇಸಿಐ ಬೆಳ್ತಂಗಡಿ ಮಂಜುಶ್ರಿಯ ಕಾರ್ಯದರ್ಶಿ‌ ಸುಧೀರ್ ಕೆ.ಎನ್ ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ಜೇಸಿಐ ಬೆಳ್ತಂಗಡಿಯ ಪೂರ್ವಾಧ್ಯಕರಾದ ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ಅಶೋಕ್ ಕುಮಾರ್ ಎಮ್.ಪಿ ಉಪಸ್ಥಿತರಿದ್ದರು.

Exit mobile version