Site icon Suddi Belthangady

ಕಾಂಗ್ರೇಸ್ ವತಿಯಿಂದ ಜಯಾನಂದ ಪಿಲಿಕಲರಿಗೆ ಶಾಸಕರಿಂದ ದೌರ್ಜನ್ಯ ಖಂಡಿಸಿ ಪ್ರತಿಭಟನೆ


ಬೆಳ್ತಂಗಡಿ; ತಾಲೂಕಿನ ಪೊಲೀಸ್ ಠಾಣೆಗಳು ಶಾಸಕರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದು ಜನ ಸಾಮಾನ್ಯರಿಗೆ ಇಲ್ಲಿ ನ್ಯಾಯ ಸಿಗುವುದೇ ಇಲ್ಲವಾಗಿದೆ. ತಾಲೂಕಿನಲ್ಲಿ ನಡೆದ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಬಿದ್ದಿರುವುದು ಸಾಬೀತಾಗಿದೆ. ಶಾಸಕರು ಅಮಯಕರ ಮೇಲೆ ದೌರ್ಜನ್ಯ ಮಾಡುತ್ತಾ, ದೌರ್ಜನ್ಯ ಮಾಡುವವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಆರೋಪಿಸಿದರು.


ಅವರು ಫೆ.27 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಜಯಾನಂದ ಪಿಲಿಕಲ ಅವರ ಮೇಲೆ ದೌರ್ಜನ್ಯ ನಡೆಸಿದ ಶಾಸಕರ ವಿರುದ್ದ ಪ್ರಕರಣ ದಾಖಲಿಸಬೇಕು, ಶಿಬಾಜೆಯ ಶ್ರೀಧರ್ ಕೊಲೆ ಪ್ರಕರಣದ ಸರಿಯಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಜಯಾನಂದ ಅವರ ಮೇಲೆ ಶಾಸಕರು ದೌರ್ಜನ್ಯ ನಡೆಸಿದ್ದು ಈ ಬಗ್ಗೆ ದೂರು ನೀಡಿದರೂ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಅವರು ಪೊಲೀಸರು ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಶಿಬಾಜೆ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿ ಡಿ.ವೈ ಎಸ್.ಪಿ ಅವರು ಶಾಸಕರ ಒತ್ತಡದಿಂದಾಗಿ‌ ಕೊಲೆಗಾರರ ಪರವಾಗಿ ನಿಂತಿದ್ದಾರೆ,ಅವರ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.ತಾಲೂಕಿನಲ್ಲಿರುವ ಇತರ ಹಲವು ಪ್ರಕರಣಗಳನ್ನು ಮುಂದಿಟ್ಟ ಬಂಗೇರ ಅವರು ಇದೆಲ್ಲ ಪ್ರಕರಣಗಳಲ್ಲಿ ಆರೋಪಿಗಳನ್ನು ಶಾಸಕರ ಒತ್ತಡದಿಂದಾಗಿ ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಸಚಿವ ಕೆ ಗಂಗಾಧರ ಗೌಡ ಮಾತನಾಡಿ ಜಯಾನಂದ ಅವರ ಮೇಲೆ ನಡೆದ ದೌರ್ಜನ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ನ್ಯಾಯ ಸಿಗುವ ವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ದಲಿತ ಮುಖಂಡ ಅಶೋಕ್ ಕೊಂಚಾಡಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್, ದೌರ್ಜನ್ಯಕ್ಕೆ ಒಳಗಾದ ಜಯಾನಂದ ಪಿಲಿಕಲ ಮಾತನಾಡಿದರು.
ವೇದಿಕೆಯಲ್ಲಿ ಬೆಳ್ತಂಗಡಿ ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ಜಿ. ಪ.ಮಾಜಿ ಜಿ.ಪಂ ಸದಸ್ಯರುಗಳಾದ ಶೇಖರ ಕುಕ್ಕೇಡಿ, ನಮಿತ, ಮುಖಂಡ ಅಬ್ದುಲ್ ರಹಿಮಾನ್ ಪಡ್ಪು ಹಾಗೂ ಇತರರು ಉಪಸ್ಥಿತರಿದ್ದರು, ಸಲೀಂ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿದರು. ಮನೋಹರ ಕುಮಾರ್ ಇಳಂತಿಲ ವಂದಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳು‌ ಕಾರ್ಯಕರ್ತರು ಭಾಗವಹಿಸಿದ್ದರು

Exit mobile version