Site icon Suddi Belthangady

ರೋಟರಿ ಕ್ಲಬ್ ವತಿಯಿಂದ ನಿರ್ಮಾಣಗೊಂಡ ನಡ ಸರಕಾರಿ ಪ್ರೌಢಶಾಲಾ ಗ್ರಂಥಾಲಯ ಉದ್ಘಾಟನೆ

ನಡ :ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್ (ರಿ) ಹಾಗೂ ರೋಟರಿ ಬೆಂಗಳೂರು ಇಂದಿರಾನಗರ ಇವರುಗಳ ಜಂಟಿ ಸಹಭಾಗಿತ್ವದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ಸುಸಜ್ಜಿತವಾದ ಗ್ರಂಥಾಲಯ ಕಟ್ಟಡದ ಉದ್ಘಾಟನೆಯನ್ನು ಫೆ.6ರಂದು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ಕೋವಿಡ್, ನೆರೆ ಹಾವಳಿ ಇವೇ ಮೊದಲಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರೋಟರಿ ಕ್ಲಬ್ ನಿರ್ವಹಿಸದ ಪಾತ್ರವನ್ನು ಶ್ಲಾಘಿಸಿದ ಶಾಸಕರು ರೋಟರಿ ಕ್ಲಬ್ ಇವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೋಟರಿ ಬೆಂಗಳೂರು ಇಂದಿರಾನಗರ ಇದರ ಮುಂದಿನ ಸಾಲಿನ ಅಧ್ಯಕ್ಷರಾದ ರೊ| ಬಾಲಕೃಷ್ಣ ನಾರಾಯಣನ್, ರೋಟರಿ ಗವರ್ನರ್ ರೊ| ಡಾ ಪಿ.ಎಂ. ಬನ್ಸಾಲಿ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಡ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ ಹಾಗೂ ನಿವೃತ ಶಿಕ್ಷಕ ಮೋಹನ್ ಜೈನ್ ಕೊಡುಗೆ ನೀಡಿದ ಪುಸ್ತಕಗಳನ್ನು ಶಾಸಕರ ಮೂಲಕ ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಇಂದಿರಾನಗರ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರುಗಳನ್ನು, ಗ್ರಂಥಾಲಯ ಕಾಮಗಾರಿ ಜವಾಬ್ದಾರಿ ನಿರ್ವಹಿಸಿದ ಇಂಜಿನಿಯರ್ ರೊ| ವಿದ್ಯಾ ಕುಮಾರ್, ಹಾಗೂ ಶಾಲೆಯ ದೈಹಿಕ ಶಿಕ್ಷಕಿ ಶ್ರೀಮತಿ ಸುಜಯ ಬಿ. ಇವರುಗಳನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಕಕ್ಷೆ ರೊ| ಮನೋರಮಾ ಭಟ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಗೌಡ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಭಯ ರೋಟರಿ ಕ್ಲಬ್ ಗಳ ಕಾರ್ಯದರ್ಶಿಗಳಾದ ರೊ| ರಕ್ಷಾ ರಾಗ್ನೀಶ್ ಹಾಗೂ ರೊ| ವಿಪಿನ್ ಲಬ್ರೋ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಸುಧಾಕರ್, ಪ್ರಾಂಶುಪಾಲ ಚಂದ್ರಶೇಖರ್, ಅಜಿತ್ ಕುಮಾರ್ ಅರಿಗ, ಜಿ.ಪಂ. ಮಾಜಿ ಸದಸ್ಯ ಬಿ. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ಧರಣೇಂದ್ರ ಜೈನ್, ಶಿಕ್ಷಣ ಸಂಯೋಜಕ ಶಂಭುಶಂಕರ್, ಸಿಆರ್ ಸಿ ರಮೇಶ್, ಬಿಆರ್ ಪಿ ಮೋಹನ್, ಮೋಹನ್ ಜೈನ್ ಆನಂದ ಶೆಟ್ಟಿ ಉಪಸ್ಥಿತರಿದ್ದರು.ಉಭಯ ರೋಟರಿ ಕ್ಲಬ್ ಗಳ ಸದಸ್ಯರುಗಳು, ಸಭೆಯಲ್ಲಿ ಹಾಜರಿದ್ದರು. ಶಿಕ್ಷಕ ಶಿವಪುತ್ರ ಸುಣಗಾರ ಕಾರ್ಯಕ್ರಮವನ್ನು ನಿರ್ವಹಿಸಿದರು. ಮುಖ್ಯ ಶಿಕ್ಷಕ ಯಾಕೂಬ್ ಎಸ್. ಸ್ವಾಗತಿಸಿ, ಶಿಕ್ಷಕ ಮೋಹನ್ ಬಾಬು ಧನ್ಯವಾದವಿತ್ತರು.

Exit mobile version