Site icon Suddi Belthangady

ಬಳಂಜ: ಶಾಲಾ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಬೆಳ್ತಂಗಡಿ: ಸರಕಾರಿ ಶಾಲೆಗಳ ಅಭಿವೃದ್ದಿಗೆ ಶಾಲಾ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಕೈಜೋಡಿಸಿದಾಗ ಮಕ್ಕಳಿಗೆ ಕಲಿಕೆಗೆ ಮೂಲ ಸೌಕರ್ಯ ಸಿಗುತ್ತದೆ. ಇಂದು ಬೆಳ್ತಂಗಡಿ ರೊಟರಿ ಕ್ಲಬ್ ವಿವಿಧ ಮೂಲ ಸೌಕರ್ಯಕ್ಕೆ 12 ಲಕ್ಷ ರೂಗಳನ್ನು ಬಳಂಜ ಶಾಲೆಗೆ ನೀಡಿದ್ದು ಅಭಿನಂದನೀಯ.ಬೆಳ್ತಂಗಡಿ ರೋಟರಿ ಕ್ಲಬ್ ನೆರೆ ಬಂದ ಸಮಯದಲ್ಲಿ, ಕರೋನಾ ಸಂದರ್ಭದಲ್ಲಿ ತಾಲೂಕಿಗೆ ನೀಡಿದ ಸೇವೆ ಮರೆಯಲಾರದು. ಬಳಂಜ ಶಾಲೆಗೆ ನೀಡಿದ ಕೊಡುಗೆಗೆ ಶಾಸಕನ ನೆಲೆಯಲ್ಲಿ ಅಭಿನಂದಿಸುತ್ತೆನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಫೆ1 ರಂದು ಬಳಂಜ ಶಾಲಾ ವಠಾರದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಕಾರದಿಂದ can Fin Homes Ltd ಇದರ ವಿಧ್ಯಾನಿದಿ ಅನುದಾನದಲ್ಲಿ ಕಲಾ ಮಂದಿರಕ್ಕೆ ಶೀಟ್ ಅಳವಡಿಕೆ, ಸೋಲಾರ್ ಅಳವಡಿಕೆ, ಮತ್ತು ಶಾಲಾ ಕೊಠಡಿ ನವೀಕರಣ ಕಾಮಗಾರಿಗೆ ರೂ 12 ಲಕ್ಷ ಮಂಜೂರಾಗಿದ್ದು ಇದರ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಶಾಲೆಯ ಪ್ರಮುಖ ಬೇಡಿಕೆಯಾದ ಕಲಾ ಮಂದಿರದ ಮುಂಭಾಗಕ್ಕೆ ಇಂಟರ್ ಲಾಕ್ ಅಳವಡಿಸುವುದಾಗಿ ಭರವಸೆ ನೀಡಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷೆ ಮನೋರಮಾ ಭಟ್ ಮಾತನಾಡಿ ಉಳ್ಳವರು ಮತ್ತು ಇಲ್ಲವರ ಕೊಂಡಿಯಾಗಿ ರೋಟರಿ ಕ್ಲಬ್ ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಇನ್ನಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಈ ಭಾರಿ ಶಿಕ್ಷಣಕ್ಕೆ ಬೆಳ್ತಂಗಡಿ ಪದವಿ ಪೂರ್ವ ಕಾಲೇಜಿಗೆ ಮತ್ತು ಬಳಂಜ ಶಾಲೆಗೆ ಕೊಡುಗೆ ನೀಡಿದ್ದು ಇದಕ್ಕೆ ಗ್ರಾಮಸ್ಥರ ,ಶಾಲಾ ಶಿಕ್ಷಕರ ಸ್ಪಂದನೆಯೂ ಕಾರಣ ಎಂದರು.

ಬಳಂಜ ಪ್ರೌಢ ಶಾಲಾ ಎಸ್.ಡಿ. ಎಂ.ಸಿ ಕಾರ್ಯಾಧ್ಯಕ್ಷ ಕೆ.ವಸಂತ ಸಾಲಿಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ರೋಟರಿ ಕ್ಲಬ್ ನವರು ಇಷ್ಟು ದೊಡ್ಡ ಮಟ್ಟದ ಅನುದಾನ ನೀಡುತ್ತಾರೆ ಎಂಬುದು ಇವತ್ತಿನ ಕಾರ್ಯಕ್ರಮವೇ ಸಾಕ್ಷಿ. ಹಳೆ ವಿದ್ಯಾರ್ಥಿಗಳಿಗೆ ತಾನು ಕಲಿತ ಶಾಲೆಯ ಮೇಲೆ ಪ್ರೀತಿ ಇದ್ದಾಗ ಇಂತಹ ಕೊಡುಗೆಗಳು ಒದಗಿ ಬರಲು ಸಾದ್ಯ ಎಂಬುದು ಇಂದು ಸಾಕಾರಗೊಂಡಿದೆ ಎಂದರು.

ಪತ್ರಕರ್ತ ಮನೋಹರ್ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಸಕ ಹರೀಶ್ ಪೂಂಜ ಗೌರವಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರಕ್ಷಾ ರಾಗ್ನೇಸ್, ಎಸ್.ಡಿ.ಎಂ ಸಿ ಅಧ್ಯಕ್ಷ ರತ್ನಾಕರ ಪೂಜಾರಿ, ಗ್ರಾ.ಪಂ ಸದಸ್ಯರಾದ ಯಶೋಧರ ಶೆಟ್ಟಿ ,ಯಕ್ಷತಾ ದೇವಾಡಿಗ, ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಸ್ ರೈ ಬಾರ್ದಡ್ಕ, ಬಳಂಜ ಶಿವಾಜಿ ಪ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಜಗದೀಶ್ ರೈ, ಪ್ರಗತಿಪರ ಕೃಷಿಕ ಚಂದ್ರರಾಜ ಪೂವಣಿ, ಶಾಲಾಭಿವೃದ್ದಿ ಸಮಿತಿ ಮಾಜಿ ಅದ್ಯಕ್ಷ ಪ್ರಮೋದ್ ಜೈನ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ವಿಲ್ಫ್ರೆಡ್ ಪಿಂಟೋ ಸ್ವಾಗತಿಸಿ, ಶಿಕ್ಷಕ ಮಲ್ಲಿಕಾರ್ಜುನ ವಂದಿಸಿದರು.

Exit mobile version