Site icon Suddi Belthangady

 ಉಜಿರೆ: ಪೆರ್ಲ ತಂಗಾಯಿ ಶ್ರೀ ವನದುರ್ಗ ಮಹೋತ್ಸವ ಸಂಪನ್ನ 

ಉಜಿರೆ: ಉಜಿರೆ ಪೆರ್ಲ ತಂಗಾಯಿ ಶ್ರೀ ವನದುರ್ಗ ದೇವಿಯ ವಾರ್ಷಿಕ  ಮಹೋತ್ಸವ ಜ. 16 ರಂದು ವೇದಮೂರ್ತಿ ಚಂದ್ರಶೇಖರ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ವಿಧ್ಯುಕ್ತವಾಗಿ ಸಂಪನ್ನಗೊಂಡಿದೆ.  ಶ್ರೀ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ ಪುಣ್ಯಾಹ, ಪ್ರಾರ್ಥನೆ, ಗಣಹೋಮ, ದುರ್ಗಾ ಹವನ ಹಾಗೂ ಕೊಪ್ಪರಿಗೆ ಏರುವ ಮೂಲಕ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿಯ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ, ಶ್ರೀ ಚಂಡಿಕಾ ಯಾಗ, ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ  ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೇವಿ ಸನ್ನಿಧಿಯಲ್ಲಿ ದೀಪಾರಾಧನೆ, ರಂಗಪೂಜೆ, ರಾತ್ರಿ ಪೂಜೆ, ಬಟ್ಟಲು ಕಾಣಿಕೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಮಹೋತ್ಸವ  ಸಂಪನ್ನಗೊಂಡಿತು.                     

ಅನುವಂಶಿಕ ಆಡಳಿತ ಮೊಕ್ತೇಸರ ಪೆರ್ಲ ಲಕ್ಷ್ಮೀನಾರಾಯಣಪ್ರಸಾದ್ ಒಪ್ಪಂತಾಯ, ಕೃಷ್ಣಮೂರ್ತಿ ಒಪ್ಪಂತಾಯ ಅವರು ನೇತೃತ್ವ ವಹಿಸಿದ್ದು ಊರ ಪರವೂರ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

Exit mobile version