Site icon Suddi Belthangady

ಮಡಂತ್ಯಾರು ಹೈಸ್ಕೂಲ್ ರೀಯೂನಿಯನ್ ಇದರ ‘ಸ್ನೇಹ ಸಂಗಮ 2023’

ಮಡಂತ್ಯಾರು : ಹೈ ಸ್ಕೂಲ್ ರೀಯೂನಿಯನ್ ಮಡಂತ್ಯಾರು ಸಂಸ್ಥೆಯ ‘ಸ್ನೇಹ ಸಂಗಮ 2023’ ಕಾರ್ಯಕ್ರಮವು ಜ.8. ರಂದು ದಿವ್ಯ ಜ್ಯೋತಿ ಸಭಾಭವನ ಮಡಂತ್ಯಾರಿನಲ್ಲಿ ನಡೆಯಿತು.
ಜೇಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರಾದ ಜೇಸಿ ರಾಧಾಕೃಷ್ಣ ಬಂಟ್ವಾಳ ಮತ್ತು ಜೇಸಿ ತುಳಸಿದಾಸ್ ಪೈ ಇವರ ನಿರೂಪಣೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ರಾಯನ್ ಡಿಸೋಜ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮ್ಯಾಥ್ಯೂ ಎನ್. ಎಂ ಇವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸುವುದರೊಂದಿಗೆ ಸಂಸ್ಥೆಯ ಸಕ್ರಿಯತೆಯನ್ನು ಮೆಚ್ಚಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಂತ್ಯಾರು ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಅಲ್ಬರ್ಟ್ ಡಿಸೋಜಾ ಇವರು ಬಡವರ ಪಾಲಿನ ಆಶಾಕಿರಣ ಎನ್ನುವ ಶೀರ್ಷಿಕೆಯ “ಸ್ಪಂದನ” ಇದನ್ನ ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ, ಸದಸ್ಯರ ಈ ಒಗ್ಗಟ್ಟಿಗೆ ಶುಭವನ್ನು ಹಾರೈಸಿದರು. ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸ ಮಧುಕರ ಮಲ್ಯ ಹೈಸ್ಕೂಲ್ ಯೂನಿಯನ್ ಇದರ 2023 ನೇ ವರ್ಷದ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ದಿಕ್ಸೂಚಿ ಭಾಷಣದಲ್ಲಿ ಸ್ನೇಹ ಹೇಗಿರಬೇಕು ಸ್ನೇಹಕ್ಕೂ ಮಾನವೀಯತೆಗೂ ಇರುವ ಮೌಲ್ಯಗಳ ವಿಚಾರವಾಗಿ ತಿಳಿಸುತ್ತಾ. ವಿದ್ಯಾರ್ಥಿ ಜೀವನದ ಬಳಿಕ ಬೇರೆ ಬೇರೆ ಊರುಗಳಲ್ಲಿ ತಮ್ಮ ಬದುಕಿಗಾಗಿ ಚದುರಿ ಹೋಗಿ, 22 ವರ್ಷಗಳ ನಂತರ ಒಟ್ಟು ಸೇರಿ ಇಂತಹ ಅಪರೂಪದಲ್ಲಿ ಅಪರೂಪದ ಕಾರ್ಯಕ್ರಮವನ್ನು ಹಮ್ಮಿಕೊಂಡದರಿಂದ ನಮ್ಮ ಆಯುಷ್ಯನ ವೃದ್ಧಿಸಿದ್ದೀರಿ ಎನ್ನುವ ಮೂಲಕ ಎಲ್ಲರಿಗೆ ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಬೋಧಿಸಿದ ಶಿಕ್ಷಕರಿಗೆ ಮತ್ತು ಗುರುಗಳಿಗೆ ಗುರುವಂದನಾ ಕಾರ್ಯಕ್ರಮವು ನಡೆಯಿತು. ಮಾತ್ರವಲ್ಲದೆ ಈ ಸಂಸ್ಥೆಯ ಸದಸ್ಯರಾಗಿದ್ದುಕೊಂಡು ಆರಕ್ಷಕ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿರುವ ಡ್ಯಾನಿ ಫ್ರಾನ್ಸಿಸ್ ತಾವ್ರೋ ಮತ್ತು ದೇಶ ಸೇವೆಯನ್ನು ಗೈದು ನಿವೃತ್ತಿ ಹೊಂದಿ ಇದೀಗ ಬ್ಯಾಂಕ್ ಉದ್ಯೋಗಿಯಾಗಿರುವ ಪ್ರಕಾಶ್ ಇವರ ಸಾಧನೆಯನ್ನು ಗುರುತಿಸಿ ಗೌರವವನ್ನು ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೇಸಿಐ ಮಡಂತ್ಯಾರಿನ ಅಧ್ಯಕ್ಷರು ಸಂಸ್ಥೆಯ ಸ್ಥಾಪಕ ಸದಸ್ಯರು ಆಗಿರುವ ಜೇಸಿ ಅಶೋಕ್ ಗುಂಡಿಯಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಸದಸ್ಯೆ ಶ್ರೀಮತಿ ಅಶ್ವಿನಿ ಮತ್ತು ಬಳಗದವರಿಂದ ಪ್ರಾರ್ಥನೆ ನೆರವೇರಿತು. ನಂತರ ಕುಮಾರಿ ಹೃತಿಕಾ ಇವರಿಂದ ಸ್ವಾಗತ ನೃತ್ಯ ನಡೆಯಿತು. ಸಂಸ್ಥೆಯ ಸದಸ್ಯ ನವೀನ್ ಕುಮಾರ್ ಕೋಡ್ಲಕ್ಕೆ ಇವರು ವಂದಿಸಿದರು. ನಂತರ ಸದಸ್ಯರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Exit mobile version