Site icon Suddi Belthangady

ದಿ.ಪ್ರವೀಣ್ ನೆಟ್ಟಾರು ನೂತನ ಮನೆಯ ಶಂಕುಸ್ಥಾಪನೆ

ಪ್ರವೀಣ್ ‌ನೆಟ್ಟಾರು ಕನಸಿನ ಮನೆಗೆ ಬಿ.ಜೆ.ಪಿ. ಸಾಥ್!

ಪ್ರವೀಣ್ ಕನಸು ನನಸು ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಹೆಜ್ಜೆ

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರುರವರ ಕನಸಿನಂತೆ ಅವರ ಮನೆಯವರಿಗೆ ಹೊಸಮನೆ ನಿರಚಮಿಸಿಕೊಡಲು ಬಿ.ಜೆ.ಪಿ. ನಿರ್ಧರಿಸಿದ್ದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ಶಂಕುಸ್ಥಾಪನೆ ನೆರವೇರಿಸಿದರು.


ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ ಹೊಸ ಮನೆಗೆ ಶಂಕುಸ್ಥಾಪನೆ ಮಾಡಲಾಯಿತು. ಮೊಗರೋಡಿ ಕನ್ ಸ್ಟ್ರಕ್ಷನ್ ಕಂಪನಿಗೆ ಮನೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಡಲಾಗಿದೆ.

ಇಂದು ದಿ.ಪ್ರವೀಣ್ ನೂತನ ಮನೆಗೆ ಶಂಕುಸ್ಥಾಪನೆ ಮಾಡಲಾಯಿತು. ಈಗಾಗಲೇ ಪ್ರವೀಣ್ ಪತ್ನಿಗೆ ‌ದ.ಕ. ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಸರ್ಕಾರಿ ಕೆಲಸ ಕೊಡಿಸಲಾಗಿದೆ.

ಪ್ರವೀಣ್ ನೆಟ್ಟಾರು ‌ಮನೆಗೆ ಶಂಕುಸ್ಥಾಪನೆ ‌ನೆರವೇರಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ” ಪ್ರವೀಣ್ ಕನಸು ನನಸು ಮಾಡಲು ಪಕ್ಷ ಹೆಜ್ಜೆ ಇಟ್ಟಿದೆ.
ಇಂದು ಹೊಸ ಮನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. 50 ರಿಂದ 60 ಲಕ್ಷ ವೆಚ್ಚದಲ್ಲಿ 2700 ಚದರ ಅಡಿಯ ಮನೆ ನಿರ್ಮಾಣ ಆಗಲಿದೆ. ಬಿಜೆಪಿಯಿಂದ 25 ಲಕ್ಷ, ಸರ್ಕಾರದಿಂದ 25 ಲಕ್ಷ ಹಾಗೂ ಯುವಮೋರ್ಛಾ ವತಿಯಿಂದ 15 ಲಕ್ಷ ಕೊಡಲಾಗಿದೆ. ಪ್ರವೀಣ್ ನಮ್ಮ ಒಂದೊಳ್ಳೆ ಕಾರ್ಯಕರ್ತ, ಅವನ ಕುಟುಂಬದ ಜೊತೆ ನಾವು ನಿಂತಿದ್ದೇವೆ. ಅವನ ಕೆಲಸಕ್ಕೆ ‌ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ, ಹಾಗಾಗಿ ಇಲ್ಲಿ ಹಣ ಮುಖ್ಯವಲ್ಲ. ಬಿಜೆಪಿ ಪಕ್ಷ ಕಾರ್ಯಕರ್ತನ ಕುಟುಂಬದ ಪರ ಯಾವತ್ತೂ ‌ನಿಲ್ಲುತ್ತದೆ. ನಾವು ಹತ್ಯೆಯಾದ ವೇಳೆಯೇ ಕುಟುಂಬದ ಜೊತೆ ನಿಲ್ಲುವ ಭರವಸೆ ಕೊಟ್ಟಿದ್ದೆವು. ಮನೆಯವರು ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗ್ತಿದೆ. ಹಲವಾರು ಮಂದಿ ‌ಮನೆ ಕಟ್ಟಿ ಕೊಡಲು ಮುಂದೆ ಬಂದಿದ್ದರು. ಆದರೆ ಮನೆಯವರ ಅಭಿಪ್ರಾಯದಂತೆ ಪಕ್ಷವೇ ಮನೆ ಕಟ್ಟಿ ಕೊಡ್ತಾ ಇದೆ ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಎಸ್.ಅಂಗಾರ ಹಾಗೂ ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ರುಕ್ಮಯ ಪೂಜಾರಿ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಪ್ರವೀಣ್ ಅವರ ತಂದೆ, ತಾಯಿ, ಪತ್ನಿ ನೂತನ ಹಾಗೂ ಊರವರು ಉಪಸ್ಥಿತರಿದ್ದರು.

Exit mobile version