Site icon Suddi Belthangady

ಪ್ರವೀಣ್ ನೆಟ್ಟಾರು‌ ಕೊಲೆ ಪ್ರಕರಣ

ನಾಲ್ವರು ಆರೋಪಿಗಳಿಗೆ ಎನ್.ಐ.ಎ. ಲುಕ್ ಔಟ್ ನೋಟೀಸ್

ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಬಗ್ಗೆ ಸುಳಿವು ಕೊಟ್ಟರೆ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.

ಕಳೆದ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಸುಮಾರು 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೊಲೆಗೆ ಪ್ರಮುಖವಾಗಿ ಸಂಚು ರೂಪಿಸಿದ ಹಾಗೂ ಸಹಾಯ ಮಾಡಿದ ಆರೋಪಿಗಳ ಪೈಕಿ ನಾಲ್ವರ ಬಂಧನವಾಗಿಲ್ಲ ಎನ್ನಲಾಗುತ್ತಿದೆ. ನಂತರ ಈ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾವಣೆಯಾಗಿತ್ತು.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಪ್ರಮುಖ ಆರೋಪಿಗಳಾದ ಬೆಳ್ಳಾರೆಯ ಮಹಮ್ಮದ್ ಮುಸ್ತಾಫಾ ಮತ್ತು ಮಡಿಕೇರಿಯ ತುಫೈಲ್ ಬಗ್ಗೆ ಸುಳಿವು ನೀಡಿದರೆ ತಲಾ 5 ಲಕ್ಷ ರೂ. ಬಹುಮಾನ, ಜೊತೆಗೆ ಕೊಲೆಗೆ ಸಹಕಾರ ನೀಡಿದ ಸುಳ್ಯದ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದರೆ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.


ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಜೊತೆಗೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದೂ ತನಿಖಾ ಸಂಸ್ಥೆ ತಿಳಿಸಿದೆ. ಮಾಹಿತಿದಾರರು info.blr.nia@gov.in ಅಥವಾ Roowaas Jos, 080-29510900/8904241100 ಅಥವಾ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ), 8ನೇ ಮಹಡಿ, ಸರ್. ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071 ಈ ವಿಳಾಸಕ್ಕೆ ಸಂಪರ್ಕಿಸುವಂತೆ ವಿನಂತಿಸಲಾಗಿದೆ.

Exit mobile version