Site icon Suddi Belthangady

ನಾಲ್ಕೂರು: ಇಜಿನಡ್ಕದ ನದಿಯಲ್ಲಿ ಕಂಡು ಬಂದ ಪೂಜಾ ಸಾಮಾಗ್ರಿ

 

ಕಾದು ಕುಳಿತ ಕಾಳಿಂಗ ಸರ್ಪ, ಕೌತುಕದಿಂದ ನೋಡಲು ಬಂದ ನೂರಾರು ಜನ

ನಾಲ್ಕೂರು ಗ್ರಾಮದ ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಪೂಜಾ ಸಾಮಾಗ್ರಿ ಬಿಸಾಡಿರುವುದು ಮತ್ತು ಪಕ್ಕದಲ್ಲೇ ಕಾಳಿಂಗ ಸರ್ಪವೂ ಇದ್ದು  ಇದರ ಬಗ್ಗೆ ಜನರಲ್ಲಿ  ಕೌತುಕ ಮೂಡಿಸಿದ ಘಟನೆ ಅ.15 ರಂದು ನಡೆದಿದೆ.

 

 

ಇಜಿನಡ್ಕದ ನದಿಯಲ್ಲಿ ಹಳೆಯ ಕೆಲ ಪೂಜಾ ಪರಿಕರಗಳನ್ನು ಬಿಸಾಡಿರುವುದು ಕಂಡು ಬಂದಿದ್ದು ಆ ದಾರಿಯಲ್ಲಿ ಬಂದ ಲೈನ್ ಮೆನ್ ವೆಂಕಟ್ರಮಣ ವಳಲಂಬೆ ಬೆಳಗ್ಗೆ 10 ರ ಸುಮಾರಿಗೆ ನೋಡಿದ್ದಾರೆ. ಅಲ್ಲೇ ದಡದಲ್ಲಿ ದೊಡ್ಡ ಗಾತ್ರದ ಕಾಳಿಂಗ ಸರ್ಪವೂ ಕಂಡು ಗಾಬರಿಯಾಗಿದ್ದಾರೆ. ಇದು ಪ್ರಚಾರ ಪಡೆದು ನೂರಾರು ಜನ ಬರಲಾಂಬಿಸಿದರು. ನದಿಯಲ್ಲಿ ಕಾಲು ದೀಪ , ಆರತಿ, ಗಂಟೆ, ಹರಿವಾಣ ಇದ್ದವು. ಆದರೆ ಯಾರು ಬಿಸಾಡಿದರು ಎಂದು ಗೊತ್ತಾಗಿರಲಿಲ್ಲ.

 

ಬಳಿಕ ಸ್ಥಳೀಯರೆಲ್ಲಾ ಸೇರಿ ಅಲ್ಲೇ ಇರುವ ಚಾರ್ಮತ ನಾಗನ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿದರು. ಶೀಘ್ರ ಸತ್ಯಾಂಶ ಗೊತ್ತಾಗ ಬೇಕಾಗಿ ಪ್ರಾರ್ಥಿಸಿ ನದಿಯಲ್ಲಿದ್ದ ಪೂಜಾ ಪರಿಕರಗಳನ್ನು ಅಲ್ಲಿಂದ ಮೇಲಕೆತ್ತಲಾಯಿತು. ಆಗಲೂ ಸರ್ಪವು ಅಲ್ಲೇ ಇತ್ತೆನ್ನಲಾಗಿದೆ. ಅಷ್ಟರಲ್ಲೇ ವಿಷಯ ತಿಳಿದು ರಾಮಣ್ಣ ನಾಯ್ಕ ಎಂಬವರು ಆಗಮಿಸಿ ಪೂಜಾ ಸಾಮಾಗ್ರಿ ತಾನು ಬಿಸಾಡಿರುವುದಾಗಿ ತಿಳಿಸಿದರು. ರಾಮಣ್ಣ ನಾಯ್ಕ ಎಂಬವರ ಅಣ್ಣ ಪತ್ಯೇಕ ಮನೆ ಮಾಡಿ ವಾಸಿಸುತಿದ್ದರು. ಅವರೂ ಅಲ್ಲಿ ದೇವಿಯನ್ನು ಪೂಜಿಸುತಿದ್ದು ಅವರು ಕೆಲ ಪೂಜಾ ಸಾಮಾಗ್ರಿ ಉಪಯೋಗಿಸುತಿದ್ದು ನಿಧನಾನಂತರ ವಾರಸುದಾರರಿಲ್ಲದೆ ಅವರ ಮನೆಯಲ್ಲೇ ಅವು ಉಳಿದು ಕೊಂಡಿತ್ತು. ಇತ್ತೀಚೆಗೆ ರಾಮಣ್ಣ ನಾಯ್ಕರು ಪ್ರಶ್ನಾ ಚಿಂತಕರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ ಆ ಪರಿಕರಗಳನ್ನು ನದಿಯಲ್ಲಿ ಬಿಡುವಂತೆ ಸೂಚಿಸಿದ್ದರೆನ್ನಲಾಗಿದೆ. ಅದರಂತೆ ಮಾಡಿದ್ದಾಗಿ ರಾಮಣ್ಣ ನಾಯ್ಕರು ತಿಳಿಸಿದ್ದಾರೆ. ಎತ್ತಿ ಇಟ್ಟ ಪೂಜಾ ಪರಿಕರಗಳನ್ನು ಅವರೇ ತೆಗೆದುಕೊಂಡು ಹೋಗಿದ್ದು ಕಾಳಿಂಗ ಸರ್ಪವು ಮತ್ತೆ ಅಲ್ಲಿಂದ ತೆರಳಿತ್ತೆನ್ನಲಾಗಿದೆ.

Exit mobile version