Site icon Suddi Belthangady

ಸುಳ್ಯ ದಸರಾ : ಶಾರದಾದೇವಿಯ ವೈಭವದ ಶೋಭಾಯಾತ್ರೆ

 

ಕಣ್ತುಂಬಿಕೊಂಡ ಸಾವಿರಾರು ಮಂದಿ

ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಸುಳ್ಯ ನೇತೃತ್ವದ ಸುಳ್ಯ ದಸರಾದ ಶೋಭಾಯಾತ್ರೆ ಅ.೧೦ ರಂದು ಸಂಜೆ ವೈಭವದಿಂದ ನಡೆಯಿತು. ಸ್ತಬ್ಥ ಚಿತ್ರಗಳು, ಮ್ಯೂಸಿಕ್ ತಂಡಗಳು, ಹುಲಿ ವೇಷಧಾರಿಗಳು, ಸುಡುಮದ್ದು, ಕೊಂಬು ಕಹಳೆ ವಾಲಗಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ, ಅದ್ದೂರಿಯಾಗಿ ನಡೆಯಿತು.

 

ಸಂಜೆ ೭ ಗಂಟೆಯಿಂದ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯು ಆರಂಭಗೊಂಡು ಶೋಭಾಯಾತ್ರೆಯಲ್ಲಿ ವೀರ ಕೇಸರಿ ವಿಷ್ಣು ಸರ್ಕಲ್, ಗಜಕೇಸರಿ ಜಟ್ಟಿಪಳ್ಳ, ಬೆನಕ ಕಲಾ ಕ್ರೀಡಾ ಸಂಘ, ಡಿ.ಜೆ.ಫ್ರೆಂಡ್ಸ್ ಸುಳ್ಯ, ಗೆಳೆಯರ ಬಳಗ ಹಳೆಗೇಟು, ಕಾರ್ಗಿಲ್ ಬಾಯ್ಸ್ ಜಟ್ಟಿಪಳ್ಳ, ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ, ಅರಣ್ಯ ಇಲಾಖೆ, ಜಿ.ಪಂ. ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ದೀನ ದಯಾಳ್ ಶಿಕ್ಷಣ ಮತ್ತು ರೂರಲ್ ಮತ್ತು ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್ ಪ್ರಾಯೋಜಿತ ಟ್ಯಾಬ್ಲೋಗಳು ಸೇರಿದಂತೆ ವರ್ಣರಂಜಿತವಾಗಿ ಶೋಭಾಯಾತ್ರೆ ನಡೆಯಿತು.

ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶಾರದಾಂಬ ಪೆಂಡಾಲ್‌ನಿಂದ ಆರಂಭಗೊಂಡ ಶೋಭಾಯಾತ್ರೆ, ಕೆ.ವಿ.ಜಿ. ಕ್ಯಾಂಪಸ್, ಮೆಸ್ಕಾಂ ರಸ್ತೆ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ ಯಾಗಿ ಮುಖ್ಯ ರಸ್ತೆಗೆ ಬಂದು, ಅಲ್ಲಿಂದ ಹಳೆಗೇಟಿಗೆ ಹೋಗಿ ಹಿಂತಿರುಗಿ, ಮುಖ್ಯ ರಸ್ತೆ ರಸ್ತೆಯಾಗಿ ಸಾಗಿ ಬಾಳೆಮಕ್ಕಿ, ಗಾಂಧಿನಗರ, ವಿಷ್ಣು ಸರ್ಕಲ್ ನಿಂದಾಗಿ ಹಿಂತಿರುಗಿ ರಥ ಬೀದಿಯಾಗಿ, ಕೆ.ವಿ.ಜಿ. ಆಯುರ್ವೇದ ರಸ್ತೆಯಾಗಿ ರಾತ್ರಿ ಕಾಂತಮಂಗಲ ಸೇತುವೆ ಬಳಿ ಪಯಸ್ವಿನಿ ನದಿಯಲ್ಲಿ ಜಲಸ್ತಂಭನ ನಡೆಯಿತು.

ಎರಡು ವರ್ಷದ ಬಳಿಕ ಅದ್ದೂರಿಯಾಗಿ ನಡೆದ ಸುಳ್ಯದಸರಾ ಉತ್ಸವದ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ, ಕಣ್ತುಂಬಿಕೊಂಡರು.

ಶೋಭಾಯಾತ್ರೆ ಆರಂಭಗೊಳ್ಳುವ ಸಂದರ್ಭದಲ್ಲಿ ಶಾರದಾಂಬಾ ವೇದಿಕೆಯ ಮುಂಭಾಗದಲ್ಲಿ ಕಿಕ್ಕಿರಿದ ಜನಸಂದಣಿ ಕಂಡುಬಂದಿತ್ತು. ಸುಳ್ಯ ಗಾಂಧಿನಗರದಿಂದ ಹಳೆಗೇಟಿನವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಶೋಭಾಯಾತ್ರೆಯನ್ನು ವೀಕ್ಷಿಸಲು ಕಾದು ಕುಳಿತಿದ್ದ ದೃಶ್ಯ ಕಂಡುಬಂದಿತ್ತು.

 

ಸುಳ್ಯ ಬಸ್ ನಿಲ್ದಾಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾಂಸ್ಕೃತಿಕ ಬಳಗ ಮತ್ತು ಕಾರು ಚಾಲಕ ಮಾಲಕರ ಆಶ್ರಯದಲ್ಲಿ ಭೀಮರಾವ್ ವಾಷ್ಠರ್ ಮತ್ತು ನ್ಯಾಯವಾದಿ ಎಂ.ವೆಂಕಪ್ಪ ಗೌಡರ ನೇತೃತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಲ್ಲಿಯೂ ನೂರಾರು ಮಂದಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು.

Exit mobile version