ಶೀಘ್ರ ಕೆಲಸ ಮುಗಿಸಲು ತಾ.ಪಂ. ಸಭೆಯಲ್ಲಿ ಸೂಚನೆ
ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ನಮ್ಮ ಕ್ಲಿನಿಕ್’ ದುಗಲಡ್ಕದಲ್ಲಿ ನವೆಂಬರ್ ತಿಂಗಳಿನಿಂದ ಆರಂಭಗೊಳ್ಳಲಿದ್ದು ಕಟ್ಟಡದ ಕೆಲಸ ಶೀಘ್ರ ಮುಗಿಸುವಂತೆ ತಾ.ಪಂ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಅಭಿಷೇಕ್ ರವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ತಹಶೀಲ್ದಾರ್ ಅನಿತಾಲಕ್ಷ್ಮೀ, ಇ.ಒ. ಭವಾನಿಶಂಕರ್ ಹಾಗೂ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.
ನಮ್ಮ ಕ್ಲಿನಿಕ್ ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ರವರು “ದುಗಲಡ್ಕದಲ್ಲಿ ಕಟ್ಟಡ ಗುರುತು ಮಾಡಲಾಗಿದ್ದು, ಅದಕ್ಕೆ ಬಾಡಿಗೆ ನಿಗದಿ ಆಗಬೇಕಷ್ಟೆ. ಬಳಿಕ ಕೆಲಸಗಳು ಆಗಬೇಕು’ ಎಂದು ಹೇಳಿದರು. ” ಕಟ್ಟಡಕ್ಕೆ ಬಾಡಿಗೆ ಗುರುತಿಸಿ, ಆದಷ್ಟು ಶೀಘ್ರವಾಗಿ ಕೆಲಸ ಮುಗಿಸಬೇಕೆಂದು” ಆಡಳಿತಾಧಿಕಾರಿ ಸೂಚನೆ ನೀಡಿದರು.
ತಾಲೂಕಿನಲ್ಲಿ 6 ಶಾಲೆಗಳಿಗೆ ಆರ್.ಟಿ.ಸಿ. ಆಗದಿರುವ ಕುರಿತು ಬಿ.ಇ.ಒ. ಮಹಾದೇವ ರು ಸಭೆಗೆ ಮಾಹಿತಿ ನೀಡಿದರು. “ಆ ಶಾಲೆಗಳ ಪಟ್ಟಿ ಕಳುಹಿಸಿ ಕೊಡುವಂತೆ” ತಹಶೀಲ್ದಾರ್ ಸೂಚಿಸಿದರು.
ಸರಕಾರಿ ಇಲಾಖೆಯ ಸ್ಕೀಂ ಗಳನ್ನು ಪಂಚಾಯತ್ ಸದಸ್ಯರುಗಳ ಮೂಲಕ ಪ್ರತೀ ಮನೆಗಳಿಗೆ ತಿಳಿಸುವ ಕೆಲಸ ಆಗಬೇಕು. ಈ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಹಶೀಲ್ದಾರ್ ಅಧಿಕಾರಿಗಳಿಗೆ ಹೇಳಿದರು.
ಚುನಾವಣಾ ಐಡಿಗೆ ಆಧಾರ್ ನಂಬರ್ ಲಿಂಗ್ ಎಲ್ಲರೂ ಮಾಡಬೇಕು. ಈಗಾಗಲೇ ತಾಲೂಕಿನಲ್ಲಿ ಶೇ.77 ಗುರಿ ತಲುಪಿದ್ದೇವೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
ತಾಲೂಕಿನ ಕೃಷಿಕರು ಬೆಳೆ ಸಮೀಕ್ಷೆ ಎಂಟ್ರಿ ಮಾಡಿಕೊಳ್ಳಬೇಕು. ಇಕೆವೈಸಿ ಮಾಡದವರು ಮಾಡಬೇಕು. ಅ.ಭಾ ಕಾರ್ಡ್ ಮಾಡುವಂತೆ ಜಾಗೃತಿ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.