Site icon Suddi Belthangady

ಮುರುಳ್ಯ : ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಕೆರೆಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 13ರಂದು ಸಂಜೆ ಮುರುಳ್ಯ ಗ್ರಾಮದ ಅಲೇಕಿ ಎಂಬಲ್ಲಿ ನಡೆದಿದೆ.
ಮುರುಳ್ಯ ಗ್ರಾಮದ ಅಲೇಕಿ ಚೆನ್ನಪ್ಪ ಗೌಡರ ಪುತ್ರ ರವಿಚಂದ್ರ (40 ವರ್ಷ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ರವಿಚಂದ್ರರು ಪತ್ನಿ ಹಾಗೂ ಮಗುವಿನೊಂದಿಗೆ ಪುತ್ತೂರಿನ್ಲಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸೆ. 13 ರಂದು ಅಲೇಕಿಯ ತನ್ನ ಮನೆಗೆ ಬಂದಿದ್ದರು. ಮನೆಯಲ್ಲಿ ತಾಯಿ ಒಬ್ಬರೇ ಇರುವ ಸಂದರ್ಭದಲ್ಲಿ ಮೈಲುತುತ್ತು ಬ್ಯಾಗನ್ನು ಹಿಡಿದುಕೊಂಡು ರೋಗ ಇರುವ ಅಡಿಕೆ ಮರದ ಬುಡಕ್ಕೆ ಮೈಲುತುತ್ತನ್ನು ಪುಡಿ ಮಾಡಿ ಹಾಕುವುದಾಗಿ ಹೇಳಿ ಸಂಜೆ ಸುಮಾರು 4 ಗಂಟೆಯ ಅಂದಾಜಿಗೆ ತೋಟಕ್ಕೆ ಹೋಗಿದ್ದರು. ಸಂಜೆ 6 ಗಂಟೆಯಾದರೂ ಮಗ ಹಿಂತಿರುಗದಿದ್ದುದರಿಂದ ತಾಯಿ ಮಗನನ್ನು ಹುಡುಕಿಕೊಂಡು ತೋಟಕ್ಕೆ ಹೋಗುವಾಗ ತೋಟದ ಕೆರೆಯ ಬದಿಯಲ್ಲಿ ಚಪ್ಪಲಿ, ಮದ್ಯದ ಬಾಟಲ್ ಹಾಗೂ ಮೈಲುತುತ್ತು ಕವರ್ ಇದ್ದುದನ್ನು ಗಮನಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂತು. ನಂತರ ನೆರೆಹೊರೆಯವರಿಗೆ ವಿಷಯ ತಿಳಿಸಿದರು. ನಂತರ ಶವವನ್ನು ಮೇಲಕ್ಕೆತ್ತಿ, ಶವ ಮಹಜರಿಗೆ ಆಸ್ಪತ್ರೆಗೆ ಸಾಗಿಸಲಾಯಿತು. ಸೆ. 14 ರಂದು ಮೃತದೇಹವನ್ನು ಅಲೇಕಿ ಮನೆಗೆ ತರಲಾಯಿತು.
ಮೃತರ ತಂದೆ ಚೆನ್ನಪ್ಪ ಗೌಡರು ಈ ಮೊದಲೇ ಪುತ್ತೂರಿನ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಪತ್ನಿ ಮಂಜುಳಾ, ತಂದೆ, ತಾಯಿ, ಓರ್ವ ಪುತ್ರ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Exit mobile version