Site icon Suddi Belthangady

ತೋಟತ್ತಾಡಿ ಚಂದ್ರಶೇಖರ ಪೂಜಾರಿ ಆತ್ಮಹತ್ಯೆ ಪ್ರಕರಣ ಬಂದಿತ ಆರೋಪಿ ಯೋಗೀಶ್ ಗೆ ಜಾಮೀನು ನಿರಾಕರಣೆ

ಬೆಳ್ತಂಗಡಿ: ಸಂಘದ ಸಾಲ ಕಟ್ಟುವ ವಿಚಾರವಾಗಿ ಬೆದರಿಕೆ ಹಾಕಿ ಓರ್ವನ ಸಾವಿಗೆ ಕಾರಣವಾದ ಪ್ರಕರಣ ಸಂಬಂಧ ಬಂದಿಸಲ್ಪಟ್ಟಿದ್ದ ಆರೋಪಿ ಯೋಗೀಶನಿಗೆ ಜಾಮೀನು ನೀಡಲು ಬೆಳ್ತಂಗಡಿಯ ಮಾನ್ಯ ಹೆಚ್ಚುವರಿ ನ್ಯಾಯಾಲಯ ನಿರಾಕರಿಸಿದೆ.

ಚಂದ್ರಶೇಖರ ಪೂಜಾರಿ ಆಗಸ್ಟ್ 25ರಂದು ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಂದರ್ಭದಲ್ಲಿ ಅವರ ತಾಯಿ ಪುಷ್ಪ ನೀಡಿದ ದೂರಿನಂತೆ ಆರೋಪಿಗಳಾದ ಸಚಿನ್, ಯೋಗಿಶ್, ನಾರಾಯಣ ಮತ್ತು ಸುದರ್ಶನ್ ರವರುಗಳ ವಿರುದ್ಧ ಐಪಿಸಿ ಕಲಂ 341, 504, 506 ಜೊತೆಗೆ 34 ರಂತೆ ಎಫ್. ಐ. ಆರ್ ದಾಖಲಾಗಿತ್ತು.

ಆ ಸಂದರ್ಭದಲ್ಲಿ ಬೆಳ್ತಂಗಡಿಯ ಮಾನ್ಯ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್. ಸಿ ನ್ಯಾಯಾಲಯ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಈ ಮಧ್ಯೆ ಸೆಪ್ಟೆಂಬರ್ 23 ರಂದು ಜೀವನ್ಮರಣ ಹೋರಾಟದಲ್ಲಿದ್ದ ಚಂದ್ರಶೇಖರ ಪೂಜಾರಿ ಮೃತಪಟ್ಟಿದ್ದರು. ಆನಂತರ ಕಲಂ 306 ಅನ್ನು ಸೇರಿಸಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಮಧ್ಯೆ ಆರೋಪಿಗಳು ರಾಜಾರೋಷವಾಗಿ ಊರಿನಲ್ಲಿ ತಿರುಗಾಡುತ್ತಿದ್ದ ಬಗ್ಗೆ ಮೃತರ ಮನೆಯವರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ನಂತರ ಪ್ರಕರಣದ ಪ್ರಮುಖ ಆರೋಪಿ ಯೋಗೀಶ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಆರೋಪಿಗೆ ಈಗಾಗಲೇ ಒಂದು ಬಾರಿ ಜಾಮೀನು ನೀಡಿರುವುದರಿಂದ ಸದ್ರಿ ಜಾಮೀನನ್ನೆ ನ್ಯಾಯಾಲಯ ಪರಿಗಣಿಸಿ ಜಾಮೀನು ನೀಡುವಂತೆ ಆರೋಪಿ ಪರ ಸಲ್ಲಿಸಿದ ಮೆಮೊವನ್ನು ನ್ಯಾಯಾಲಯ ತಿರಸ್ಕರಿಸಿ ಆದೇಶ ನೀಡಿರುತ್ತದೆ.

ಆರೋಪಿಗಳು ಚಂದ್ರಶೇಖರ ರವರ ಆತ್ಮಹತ್ಯೆ ಗೆ ಪ್ರಚೋದನೆ ನೀಡಿ ಗಂಭೀರ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಆರೋಪಿಗೆ ಜಾಮೀನು ನೀಡಬಾರದಾಗಿ ಸರಕಾರದ ಪರ ವಾದವನ್ನು ಪುರಸ್ಕಾರಿಸಿದ ಮಾನ್ಯ ನ್ಯಾಯಾಲಯ ಆರೋಪಿ ಸಲ್ಲಿಸಿದ ಮೆಮೊ ತಿರಸ್ಕರಿಸಿದೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ವಕೀಲರಾದ ದಿವ್ಯಾರಾಜ್ ಹೆಗ್ಡೆ ವಾದಿಸಿದ್ದರು.

Exit mobile version