Site icon Suddi Belthangady

ಧರ್ಮಸ್ಥಳ ಲಕ್ಷದೀಪೋತ್ಸವ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ನ.22ರಂದು ನಡೆದ ಸರ್ವಧರ್ಮ ಸಮ್ಮೇಳನದ 9೦ನೇ ಅಧಿವೇಶನವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಬಹುಶ್ರುತ ವಿದ್ವಾಂಸರು ಮತ್ತು ಶಿವಮೊಗ್ಗದ ಪ್ರಸಿದ್ಧ ನ್ಯಾಯವಾದಿ ಎಂ.ಆರ್ ಸತ್ಯನಾರಾಯಣ ಅವರು ವಹಿಸಿದ್ದರು. ಬಸ್ರಿಕಟ್ಟೆ ಧರ್ಮಗುರು ಫಾ. ಮಾರ್ಸೆಲ್ ಪಿಂಟೋ ಕ್ರೈಸ್ತ ಧರ್ಮದ ಬಗ್ಗೆ, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ಇ ವಾಲೀಕಾರ ಇಸ್ಲಾಂ ಧರ್ಮದ ಬಗ್ಗೆ, ಶ್ರೇಷ್ಠ ವಾಗ್ಮಿ ಮೂಡುಬಿದಿರೆಯ ಮುನಿರಾಜ ರೆಂಜಾಳ ಜೈನ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಸುರ್ಯಗುತ್ತು, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಾಪಕ ಸುನೀಲ್ ಪಂಡಿತ್, ಶ್ರೀಮತಿ ಶ್ರದ್ಧಾ ಅಮಿತ್ ಸನ್ಮಾನ ಪತ್ರ ವಾಚಿಸಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಉಪನ್ಯಾಸಕಾರನ್ನು ಸನ್ಮಾನಿಸಿದರು. ಉಪನ್ಯಾಸಕ ಡಾ. ಶ್ರೀಧರ್ ಭಟ್ ಕಾಯ೯ಕ್ರಮ ನಿರೂಪಿಸಿದರು. ಧಮ೯ಸ್ಥಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಮೇಶ ಗೌಡ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ವಿದುಷಿ ಡಾ. ಜಯಂತಿ ಮತ್ತು ಕುಮರೇಶ್ ಇವರಿಂದ ಜುಗುಲ್ ಬಂದಿ ಕಾರ್ಯಕ್ರಮ ನಡೆಯಿತು. ವಯಲಿನ್‌ನಲ್ಲಿ ಆರ್. ಕುಮರೇಶ್,ವೀಣೆಯಲ್ಲಿ ವಿದುಷಿ ಡಾ. ಜಯಂತಿ ಕುಮರೇಶ್, ಮೃದಂಗದಲ್ಲಿ ವಿದ್ವಾನ್ ಜಯಚಂದ್ರ ರಾವ್, ತಬಲಾ ಮತ್ತು ಮೋರ್‍ಚಿಂಗ್‌ನಲ್ಲಿ ವಿದ್ವಾನ್ ಪ್ರಮಥ್ ಕಿರಣ್ ಸಹಕರಿಸಿದರು.

Exit mobile version