ಉಜಿರೆ:ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಅನೇಕರ ಜೀವನಕ್ಕೆ ಬೆಳಕು ನೀಡುತ್ತಿರುವ ಉಜಿರೆಯ ‘ಬದುಕು ಕಟ್ಟೋಣ ಬನ್ನಿ ತಂಡ’ದ ವತಿಯಿಂದ ಉಜಿರೆ ಗ್ರಾಮದ ಪಡುವೆಟ್ಟು ಬೈಲಿನಲ್ಲಿ ದ್ವಿತೀಯ ವರ್ಷದ ನೇಜಿ ನಾಟಿ ಕಾರ್ಯಕ್ರಮವು ನ. 13ರಂದು ನಡೆಯಿತು. ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಇದು ಒಂದು ಪುಣ್ಯದ ಕೆಲಸ. ಕೋರೋನ ಸಂದರ್ಭದಲ್ಲಿ ಕೃಷಿಗೆ ಮಹತ್ವ ಸಿಕ್ಕಿದ್ದು. ಕೃಷಿಗೆ ಅದರದ್ದೇ ಆದ ಮಹತ್ವ ಇದೆ ಎಂದರು.
ಕಾರ್ಯಕ್ರಮದಲ್ಲಿ ಶರತ್ ಕೃಷ್ಣ ಪಡುವೆಟ್ನಯ, ವಕೀಲರಾದ ಧನಂಜಯ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಬಾಲಕೃಷ್ಣ ಪೂಜಾರಿ,ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಶ್ರಿಮತಿ ಮನೋರಮಾ, ಎಸ್ ಡಿ ಎಂ ಕಾಲೇಜಿನ ಪ್ರಾದ್ಯಪಕ ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ,ಡಾ.ಹೇಮಾವತಿ ವೀ.ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ಪಡುವೆಟ್ಟು ಬೈಲಿನ ಸುಮಾರು 5 ಎಕರೆ ಪ್ರದೇಶದ ಗದ್ದೆಯಲ್ಲಿ ನೇಜಿ ನಾಟಿ, ದೇವರ ಗದ್ದೆಯಲ್ಲಿ ಬಾಳೆಹಾಕುವ ವಿಧಿ ವಿಧಾನಗಳನ್ನು ನಡೆಸುವ ಮೂಲಕ ಸುಗ್ಗಿ ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಯುವ ಜನತೆಗೆ ಭತ್ತ ಬೇಸಾಯದ ಮಾಹಿತಿ ಕಾರ್ಯಾಗಾರವನ್ನು ನೀಡುವ ಉದ್ದೇಶವನ್ನು ಹೊಂದಿರುವ ಇದರಲ್ಲಿ ಉಜಿರೆಯ ಎಸ್ ಡಿ ಎಂ ಕಾಲೇಜಿನ ನೂರರಷ್ಟು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಶಿಸಿ ಹೋಗುತ್ತಿರುವ ಭತ್ತದ ಬೇಸಾಯವನ್ನು ಹಿಂದಿನ ಪದ್ಧತಿಗಳೊಂದಿಗೆ ಯುವಜನತೆಗೆ ಪರಿಚಯಿಸುವ ಜತೆಗೆ ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ಕಾಳಜಿಯ ಕಾರ್ಯಕ್ರಮವಾಯಿತು.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಸ್ತಾವಿಕ ವಾಗಿ ಮಾತನಾಡಿ ಗೋವಿಗಾಗಿ ಮೇವು ಈ ಗದ್ದೆಗಳಿಂದ ಬರುವ ಫಸಲನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ನೈವೇದ್ಯಕ್ಕೆ ಬೇಕಾದ ಅಕ್ಕಿಗೆ ನೀಡಲಾಗುತ್ತದೆ. ಇದರಿಂದ ಸಿಗುವ ಬೈಹುಲ್ಲನ್ನು ಕಳೆಂಜದಲ್ಲಿರುವ ನಂದಗೋಕುಲ ಗೋಶಾಲೆಗೆ ಪೂರೈಸಲಾಗುತ್ತದೆ. ಇದು ಅಲ್ಲಿರುವ ಗೋವುಗಳ ಮೇವಿಗೆ ಅನುಕೂಲವಾಗಲಿದೆ ಎಂದರು.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ ವಂದನಾರ್ಪಣೆ ಗೈದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.