ವೇಣೂರು: ವೇಣೂರು ಭಾರತೀಯ ಜೈನ್ ಮಿಲನ್ನ ಮಾಸಿಕ ಸಭೆ ಹಾಗೂ ಆಹಾರೋತ್ಸವ ಕಾರ್ಯಕ್ರಮವು ಸೆ.25ರಂದು ಬಾಹುಬಲಿ ಸಭಾಭವನದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಮಿಲನ್ ಅಧ್ಯಕ್ಷೆ ಸರೋಜಾ ಜಿ. ಜೈನ್ ವಹಿಸಿದ್ದರು. ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು ಮಾತನಾಡಿ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜೈನರನ್ನು ಒಗ್ಗೂಡಿಸುವ ಕಾರ್ಯ ಜೈನ್ ಮಿಲನ್ನಿಂದ ಆಗಿದೆ.
ಮುಂದಿನ ದಿನಗಳಲ್ಲಿ ಜಿನಭಜನಾ ಸ್ಪರ್ಧೆ, ವಲಯ ಸಮ್ಮೇಲನಗಳು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ವಿನಂತಿಸಿದರು. ಮಿಲನ್ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ, ಮಾಜಿ ಅಧ್ಯಕ್ಷ ಬಿ. ರತ್ನವರ್ಮ ಇಂದ್ರ, ನವೀನ್ಚಂದ್ ಬಳ್ಳಾಲ್, ಕೋಶಾಧಿಕಾರಿ ಸುನಿತಾ ಬಳ್ಳಾಲ್, ಕಾಂತಿ ಜಿತೇಂದ್ರ, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ಬಾಹುಬಲಿ ಯುವಜನ ಸಂಘ, ಬ್ರಾಹ್ಮಿ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಮಿಲನ್ ಸದಸ್ಯರು ಮನೆಯಲ್ಲಿ ತಯಾರಿಸಿದ ಸುಮಾರು 47 ಬಗೆಯ ವಿವಿಧ ಸಾಂಪ್ರದಾಯಿಕ ತಿಂಡಿ, ತಿನಸು, ಖಾದ್ಯಗಳ ಆಹಾರೋತ್ಸವವನ್ನು ಬಂಟ್ವಾಳ ಮಿಲನ್ನ ನಿರ್ದೇಶಕಿ ಸೀಮಾ ಸುದರ್ಶನ್ ಜೈನ್ ಉದ್ಘಾಟಿಸಿದರು.
ಸುಪ್ರಿಯಾ ಪ್ರಾರ್ಥಿಸಿ, ಮಿಲನ್ ನಿರ್ದೇಶಕ ಬಿ. ಪ್ರಮೋದ್ ಕುಮಾರ್ ಸ್ವಾಗತಿಸಿದರು. ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಜತೆ ಕಾರ್ಯದರ್ಶಿ, ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿ, ಮಿಲನ್ ಕಾರ್ಯದರ್ಶಿ ಜ್ಯೋತ್ಸ್ನಾ ವಂದಿಸಿದರು. ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.