ವೇಣೂರು: ಇಲ್ಲಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ರೂ. 2760391470 ಕೋಟಿ ವ್ಯವಹಾರ ನಡೆಸಿ ರೂ. 1,25,58,181.54 ಲಾಭ ಗಳಿಸಿದೆ. ಲಾಭಾಂಶವನ್ನು ವಿಂಗಡಿಸಿ ಸದಸ್ಯರಿಗೆ ಶೇ. 19.50 ಡಿವಿಡೆಂಟ್ ವಿತರಿಸಲು ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಹೇಳಿದರು.ಅವರು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ರವಿವಾರ ಜರಗಿದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಆರೂವರೆ ವರ್ಷಗಳಿಂದ ನನ್ನ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಸಮಗ್ರ ಅಭಿವೃದ್ಧಿ ಮತ್ತು ಸದಸ್ಯರ ಹಿತಾಶಕ್ತಿಯ ದೃಷ್ಟಿಯಿಂದ ವಿವಿಧ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಸತತ ಎ ಗ್ರೇಡ್:- ಲೆಕ್ಕಪರಿಶೋಧಕರಿಂದ ಎ ಗ್ರೇಡನ್ನು ಕಾಯ್ದುಕೊಂಡಿರುವ ಸಂಘವು ಕಳೆದ 6 ವರ್ಷಗಳಲ್ಲಿ 4 ಬಾರಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಜಿಲ್ಲಾಮಟ್ಟದ ಉತ್ತಮ ಸಂಘ ಪ್ರಶಸ್ತಿ ಬಂದಿದೆ ಎಂದರು.
ರೂ. 1.22 ಕೋಟಿ ವೆಚ್ಚದ ಗೋದಾಮು ಕಟ್ಟಡ:-
ಸುಮಾರು ರೂ. 1.22 ಕೋಟಿ ವೆಚ್ಚದಲ್ಲಿ ಹೊಸ ಗೋದಾಮು ಕಟ್ಟಡಕ್ಕೆ ನಬಾರ್ಡ್ನಿಂದ ರೂ. 80 ಲಕ್ಷ ಸಾಲದ ರೂಪದಲ್ಲಿ ಅನುದಾನ ಬಂದಿದ್ದು, ಶೀಘ್ರ ಗೋದಾಮ ಕಟ್ಟಡ ನಿರ್ಮಾಣವಾಗಲಿದೆ ಎಂದರು. ಸಂಪನ್ಯೂಲ ಅಧಿಕಾರಿ ಉಷಾ ನಾಯ್ಕ್ ಅವರು ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ಮತ್ತು ಸಬ್ಸಿಡಿ ಸಾಲಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ನಿರ್ದೇಶಕರುಗಳಾದ ರಾಮ್ದಾಸ್ ನಾಯಕ್, ಸಂದೀಪ್ ಹೆಗ್ಡೆ, ನಾಗಪ್ಪ, ಎಂ.ಆರ್. ಸಂತೋಷ್, ಗಣಪತಿ ಪ್ರಸನ್ನ, ದೋಗುನಾಯ್ಕ, ವೀಣಾ, ಆಶಾ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಸ್ವಾಗತಿಸಿದರು. ನಿರ್ದೇಶಕ ಸುಧೀರ್ ಭಂಡಾರಿ ವಂದಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ ವಾರ್ಷಿಕ ವರದಿ ಮಂಡಿಸಿ, ಸಭೆಯನ್ನು ನಿರ್ವಹಿಸಿದರು.
ಸಮ್ಮಾನ-ಗೌರವಾರ್ಪಣೆ:-
ಸಂಘದಲ್ಲಿ ಪ್ರಭಾರ ಲೆಕ್ಕಿಗರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಹಾವೀರ ಜೈನ್ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಸಂಘದ ಹಿರಿಯ 10 ಮಂದಿ ಸದಸ್ಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಂಘದ ಸದಸ್ಯರ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಪ್ರಭಾರ ಲೆಕ್ಕಿಗ ಭರತ್ರಾಜ್ ಸಮ್ಮಾನಪತ್ರ ವಾಚಿಸಿದರು.