ಬೆಳ್ತಂಗಡಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ ಇದರ 2021-22ನೇ ಸಾಲಿನ ಆರ್ಕ್ ಪಿಜಿಸಿ ಅಂಬಾಸಿಡರ್ ಆಗಿ ಉಜಿರೆಯ ಗಣೇಶ್ ಪ್ರಸಾದ್ ಭಂಡಾರ್ಕರ್ ನೇಮಕಗೊಂಡಿದ್ದು, ನಮ್ಮ ದೇಶ, ರಾಜ್ಯ ಹಾಗೂ ಹುಟ್ಟಿದ ಊರಿಗೆ ಕೀರ್ತಿ ತಂದಿರುದ್ದಾರೆ.
ಉಜಿರೆ ಕಾಶಿಬೆಟ್ಟು ನಿವಾಸಿ ಕ್ಲಾಸ್- I ಪಿಡಬ್ಲ್ಯೂಡಿ ಗುತ್ತಿಗೆದಾರ ಗೋಕುಲ್ದಾಸ್ ಭಂಡಾರ್ಕರ್ ಹಾಗೂ ಗೌತಮಿ ಭಂಡಾರ್ಕರ್ ದಂಪತಿ ಪುತ್ರರಾಗಿರುವ ಗಣೇಶ್ ಪ್ರಸಾದ್ ಭಂಡಾರ್ಕರ್ ರವರು ಸಿಡ್ನಿಯಲ್ಲಿರುವ ಯುನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ನ ಯು.ಎನ್.ಎಸ್.ಡಬ್ಲ್ಯೂ ವಿಶ್ವವಿದ್ಯಾನಿಲಯದಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್ ಮತ್ತು ಮಾರ್ಕೆಟಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.
ದೇಶದ ಪ್ರಖ್ಯಾತ ಕಾಲೇಜು ವೆಲ್ಲೂರುನ ಇನ್ಸ್ಟ್ಯೂಟ್ ಆಫ್ ಟೆಕ್ನೋಲಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ನಲ್ಲಿ ಬಿ.ಟೆಕ್ ಪದವಿಯನ್ನು ಪೂರ್ಣಗೊಳಿಸಿದ್ದು, ಸಿಡ್ನಿಯ ತನ್ನ ವಿಶ್ವವಿದ್ಯಾನಿಲಯವನ್ನು ನ್ಯಾಷನಲ್ ಎಜುಕೇಷನಲ್ ಕಾನ್ಫರೆನ್ಸ್ನಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಬಹು ಭಾಷಾ ಪರಿಣತರಾಗಿರುವ ಗಣೇಶ್ ಪ್ರಸಾದ್ ಅವರು ಸುಮಾರು 7 ಭಾಷೆಗಳಲ್ಲಿ ಸಂವಹನ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಪ್ರತಿಭೆಯಾಗಿದ್ದು, ‘ಅನೇಕತೆಯಲ್ಲಿ ಏಕತೆ’ ತತ್ವದಲ್ಲಿ ನಂಬಿಕೆಯನ್ನಿರಿಸಿಕೊಂಡವರಾಗಿದ್ದಾರೆ. ಅವರೊಬ್ಬ ಪರಿಪೂರ್ಣ ವಿದ್ಯಾರ್ಥಿಯಾಗಿರುವುದಲ್ಲದೆ, ಯಶಸ್ವಿ ಉದ್ಯಮಿ. ಕ್ರಿಪ್ಟೋಕರೆನ್ಸಿ ವ್ಯಾಪಾರಿ ಮತ್ತು ಲೋಕೋಪಕಾರಿ.
ಈ ವರ್ಷ ಅವರು ಶೂನ್ಯದಿಂದ ಪ್ರಾರಂಭವಾಗುವ ಒಂದು ಮಿಲಿಯನ್ ಡಾಲರ್ ವೈಯಕ್ತಿಕ ಸಂಪತ್ತನ್ನು ಸಂಗ್ರಹಿಸಿದ್ದಾರೆ ಮತ್ತು ಅವರ ಮಾಸಿಕ ಲಾಭದ ಒಂದು ಭಾಗವನ್ನು ಕೋವಿಡ್-ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. ವೈಯಕ್ತಿಕ ಬೆಳವಣಿಗೆಯನ್ನು ಮಾತ್ರವಲ್ಲದೆ ಸಮುದಾಯದ ಬೆಳವಣಿಗೆಯನ್ನೂ ಸಹ ನೋಡುತ್ತಾರೆ.
ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧಮ ಶಾಲೆಯಲ್ಲಿ ಪ್ರಾಥಮಿಕ, ಮೂಡಬಿದ್ರೆಯಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆದಿರುವ ಗ್ರಾಮೀಣ ಭಾಗದ ಪ್ರತಿಭೆಯೊಬ್ಬರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮೂಲಕ ತನ್ನೂರಿನ ಕೀರ್ತಿಯನ್ನು ಬೆಳಗಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.