ಬಿ.ಎಸ್.ಯಡಿಯೂರಪ್ಪ ಹೋರಾಟ ಮನೋಭಾವದವರು,ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ: ಕೆ. ವಸಂತ ಬಂಗೇರ
ಬೆಳ್ತಂಗಡಿ; ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೊಷಣೆ ಮಾಡಿದ ವೇಳೆ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ಸಂದರ್ಭವನ್ನು ಉಲ್ಲೇಖಿಸಿ ಬೆಳ್ತಂಗಡಿಯ ಮಾಜಿ ಶಾಸಕ ಕೆ ವಸಂತ ಬಂಗೇರರನ್ನು ನೆನಪಿಸಿಕೊಂಡರು.
ಸಿ.ಎಂ ರಾಜೀನಾಮೆ ಘೋಷಣೆ ಮಾಡುವ ವೇಳೆ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ತಾನು ಮತ್ತು ಬೆಳ್ತಂಗಡಿಯ ವಸಂತ ಬಂಗೇರ ರವರು ವಿಧಾನಸಭೆಗೆ ಆಯ್ಕೆಯಾಗಿರುವ ಸಂದರ್ಭದಲ್ಲಿ ಇಬ್ಬರೂ ಒಟ್ಟುಗೂಡಿ ಪಕ್ಷವನ್ನು ಕಟ್ಟಿರುವುದಾಗಿ ತಿಳಿಸಿದ್ದರು. ಇದಕ್ಕೆ ಬೆಳ್ತಂಗಡಿಯ ತಮ್ಮ ಕಛೇರಿಯಲ್ಲಿ ಸುದ್ದಿಗೆ ಪ್ರತಿಕ್ರಿಯಿಸಿರುವ ವಸಂತ ಬಂಗೇರರವರು 1985 ರಲ್ಲಿ ಕರ್ನಾಟಕ ರಾಜ್ಯದಲ್ಲಿ ನಾನು ಮತ್ತು ಯಡಿಯೂರಪ್ಪರವರು ಇಬ್ಬರೇ ಬಿಜೆಪಿಯಲ್ಲಿ ವಿಧಾನಸಭಾ ಸದಸ್ಯರಾಗಿದ್ದೆವು. ಪಕ್ಷವನ್ನು ಕಟ್ಟುವಲ್ಲಿ ನಾವಿಬ್ಬರೇ ಒಗ್ಗಟ್ಟಾಗಿ ಹೋರಾಟ ಮಾಡಿದ್ದೆವು.
ಯಡಿಯೂರಪ್ಪರವರು ಹೋರಾಟದ ಪ್ರವೃತ್ತಿಯುಳ್ಳವರು. ಈ ರೀತಿ ಪ್ರಾರಂಭದ ಹಂತದಿಂದ ಇಂದು ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ಕೂಡ ತಮ್ಮ ಹೋರಾಟವನ್ನು ಮುಂದುವರಿಸಿಕೊಂಡು ವಿಜಯಿಯಾಗಿದ್ದಾರೆ ಎಂಬುವುದನ್ನು ಹೇಳುವುದಕ್ಕೆ ನಾನು ಇಷ್ಟಪಡುತ್ತೇನೆ. ರಾಜೀನಾಮೆ ನೀಡುವ ಈ ಸಂದರ್ಭದಲ್ಲಿ ಅವರು ನನ್ನ ಹೆಸರನ್ನು ಹೇಳುವ ಅವಶ್ಯಕತೆ ಇರಲಿಲ್ಲ. ಆದರೂ ಅವರು ಈ ಸಂದರ್ಭದಲ್ಲೂ ನನ್ನನ್ನು ಎರಡೆರಡು ಬಾರಿ ನೆನಪಿಸಿಕೊಂಡಿದ್ದಾರೆ ಎಂದರೆ ನಾನು ತುಂಬಾ ಸಂತೋಷ ಪಡುತ್ತಿದ್ದೇನೆ.
ನಾವು ಸುಮಾರು 8 ವರ್ಷಗಳ ಕಾಲ ಒಟ್ಟಿಗಿದ್ದೆವು. ಆಗ ಅವರು ಮುಖ್ಯಮಂತ್ರಿ ಅಥವಾ ಉಪಮುಖ್ಯ ಮಂತ್ರಿ ಆಗಿರ್ಲಿಲ್ಲ. ಶಾಸಕರಾಗಿದ್ದ ಅವರು ನನ್ನ ಜೊತೆ ತುಂಬಾ ಅನ್ಯೋನ್ಯತೆಯಿಂದ ಇದ್ದರು. ವಿಧಾನಸಭೆಯಲ್ಲಿ ಅಧಿವೇಶನದ ವೇಳೆ ಬಾವಿಗಿಳಿದು ಹೋರಾಟ ಮಾಡುತ್ತಿದ್ದರು. ನಾವಿಬ್ಬರೂ ಜೊತೆಯಾಗಿ ಹೋರಾಟ ಮಾಡುತ್ತಿದ್ದೆವು ಎಂದು ಬಂಗೇರರು ಆ ದಿನಗಳನ್ನು ನೆನಪಿಸಿಕೊಂಡರು ಹಾಗೂ ಯಡಿಯೂರಪ್ಪರವರು ಈಗಲೂ ಕೂಡ ಹೋರಾಟದ ಮನೋಭಾವವನ್ನೇ ಬೆಳೆಸಿಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕರು ಯಡಿಯೂರಪ್ಪ ರವರು ಜು.25 ರೊಳಗೆ ರಾಜೀನಾಮೆ ಕುರಿತು ಹೇಳುವುದಾಗಿ ಹೇಳಿಕೆ ನೀಡಿದ್ದು, ಕೊಟ್ಟ ಮಾತನ್ನು ಇಂದು ಅವರು ಉಳಿಸಿಕೊಂಡಿದ್ದಾರೆ ಎಂದರು.