ಶಿಬಾಜೆ ಪೆರ್ಲ ಸರಕಾರಿ ಉ.ಹಿ.ಪ್ರಾ.ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷಪ್ರಾಶನ ಮಾಡಿರುವ ಪ್ರಕರಣದ ಬೆನ್ನಲ್ಲೇ ಶಿಬಾಜೆ ಗ್ರಾಮ ಪಂಚಾಯತ್ನ ಕುಡಿಯುವ ನೀರಿನ ಟ್ಯಾಂಕ್ಗೂ ವಿಷಬೆರೆಸಿದ ಪ್ರಕರಣ ನಡೆದಿರುವುದು ಡಿ.13 ರಂದು ಬೆಳಕಿಗೆ ಬಂದಿದೆ.
ಪೆರ್ಲ ಸಮೀಪದ ಬಟ್ಟಾಜೆ ಎಂಬಲ್ಲಿ ಕಪಿಲಾ ನದಿಯ ದಡದಲ್ಲಿ ಶಿಬಾಜೆ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ನೀರಿಗಾಗಿ ನಿರ್ಮಾಣವಾಗಿರುವ ಟ್ಯಾಂಕ್ಗೆ ಸಹ ವಿಷ ಬೆರೆಸಲಾಗಿದೆ. ನದಿ ದಡದಲ್ಲಿರುವ ಈ ಬೃಹತ್ ಟ್ಯಾಂಕ್ನಿಂದ ಪಂಪ್ ಮೂಲಕ ನೀರು ಲಿಫ್ಟ್ ಮಾಡಿ ಪೆರ್ಲದಲ್ಲಿರುವ ಇನ್ನೊಂದು ಟ್ಯಾಂಕ್ಗೆ ತುಂಬಿಸಲಾಗುತ್ತದೆ. ಈ ಟ್ಯಾಂಕ್ನಿಂದ ಪೆರ್ಲ ಸರಕಾರಿ ಹಿ.ಪ್ರಾ.ಶಾಲೆ ಸೇರಿದಂತೆ ಸುತ್ತಲಿನ ಸುಮಾರು 70 ಮನೆಗಳಿಗೆ ನೀರು ಪೂರೈಕೆಯಾಗುತ್ತದೆ.
ಅಲ್ಲದೇ ಟ್ಯಾಂಕ್ನ ನೀರು ಬಣ್ಣ ಕಳೆದುಕೊಂಡಿದ್ದು ಟ್ಯಾಂಕ್ನೊಳಗಿಂದ ನೊಣಗಳು ಹಾರುತ್ತಿರುವುದು ಕಂಡು ಬಂದಿದೆ. ನದಿಯಲ್ಲಿ ಟ್ಯಾಂಕ್ಗೆ ಬರುವ ಪೈಪನ್ನು ನದಿಯಿಂದ ಮೇಲೆತ್ತಿರುವುದು ಕಂಡುಬಂದಿದ್ದು ಮತ್ತು ಹೆಜ್ಜೆ ಗುರುತುಗಳು ಕಾಣುತ್ತಿವೆ. ಪೆರ್ಲ ಶಾಲಾ ಘಟನೆಯ ಬೆನ್ನಲ್ಲೇ ಸಮೀಪದ ಮನೆಗಳಿಗೆ ಬಳಸುವ ಟ್ಯಾಂಕ್ಗೂ ವಿಷಬೆರೆಸಿರುವ ಪ್ರಕರಣ ನಡೆದಿರುವುದು ಈ ಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಸದಸ್ಯ ರಮೇಶ್ ಗೌಡ ಕುರುಂಜ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವೃತ್ತ ನಿರೀಕ್ಷಕ ಸಂದೇಶ್ , ಧರ್ಮಸ್ಥಳ ಠಾಣಾ ಎಸ್ಐ ಓಡಿಯಪ್ಪ ಗೌಡರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.