ಬೆಳ್ತಂಗಡಿ: ಶಾಸಕರು ಮತ್ತು ಜನಪ್ರತಿನಿಧಿಗಳ ಸಹಯೋಗದೊಂದಿಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸುದ್ದಿ ಮಾಹಿತಿ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜನಸ್ನೇಹಿ ಪೊಲೀಸ್-ಕಾನೂನು ಸ್ನೇಹಿ ಜನತೆ ಅಪರಾಧ ಮುಕ್ತ ಗ್ರಾಮಗಳುಳ್ಳ ಬೆಳ್ತಂಗಡಿ ತಾಲೂಕು ನಿರ್ಮಾಣ ಘೋಷಣೆ ಕಾರ್ಯಕ್ರಮವು ಫೆ.23 ರಂದು ಬೆಳ್ತಂಗಡಿಯಲ್ಲಿ ಜರುಗಲಿದೆ ಎಂದು ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ|ಯು.ಪಿ ಶಿವಾನಂದ ತಿಳಿಸಿದರು. ಅವರು ಫೆ.21 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಪುತ್ತೂರು ಎ.ಸಿ, ಡಿವೈಎಸ್ಪಿ ಹಾಗೂ ಶಾಸಕರು ಭಾಗವಹಿಸಲಿದ್ದಾರೆ. ಸಮಾಜದ ಎಲ್ಲಾ ವರ್ಗದ ಪ್ರತಿನಿಧಿಗಳು, ಸಂಘ ಸಂಸ್ಥೆಯ ಪ್ರಮುಖರನ್ನು, ಆಸಕ್ತ ಜನಸಾಮಾನ್ಯರನ್ನು, ಕಾಲೇಜು ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿಆಹ್ವಾನಿಸಲಾಗಿದೆ. ಶಾಸಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಜನರ ಮಧ್ಯೆ ಸಂವಾದ ಕೂಡಾ ನಡೆಯಲಿದೆ.
ಕೆಲವು ಗ್ರಾಮದವರು ತಮ್ಮ ಗ್ರಾಮವನ್ನು ಅಪರಾಧ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಮುಂದೆ ಬಂದಿದ್ದು, ತಮ್ಮ ಗ್ರಾಮವನ್ನು ಕೂಡಾ ಅಪರಾಧ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂಬ ಇಚ್ಛೆ ಉಳ್ಳವರು ಸ್ಥಳೀಯವಾಗಿ ಎಲಾ ವರ್ಗದ ಜನರೊಂದಿಗೆ ಚರ್ಚಿಸಿ, ತೀರ್ಮಾನಕ್ಕೆ ಬಂದು ಫೆ.23 ರಂದು ನಡೆಯುವ ಕಾರ್ಯಕ್ರಮದಲ್ಲಿ ಘೋಷಣೆ ಮಾಡಬಹುದಾಗಿದೆ ಮತ್ತು ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಹಕಾರವನ್ನು ಕೇಳಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ವ್ಯವಸ್ಥಾಪಕರಾದ ಮಂಜುನಾಥ ರೈ, ಸುದ್ದಿ ವೆಬ್ಸೈಟ್ ನೆಟ್ವರ್ಕ್ ನಿರ್ದೇಶಕಿ ಸಿಂಚನ ಊರುಬೈಲು, ಜಾಹೀರಾತು ಮುಖ್ಯಸ್ಥ ತುಕಾರಾಮ.ಬಿ, ಜಾಹೀರಾತು ವಿಭಾಗದ ಸಂತೋಷ್ ಪಿ ಕೋಟ್ಯಾನ್ ಉಪಸ್ಥಿತರಿದ್ದರು.