ಮುಂಡಾಜೆ: ಉಜಿರೆಯ ಖಾಸಗಿ ಸಂಸ್ಥೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮಧ್ಯೆ ಕೋವಿಡ್ ದೃಢಪಟ್ಟು ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಇದೀಗ ಮನೆತಲುಪಿದ ಮುಂಡಾಜೆ ಗ್ರಾಮದ ಅಗರಿ ಮನೆ ಚಂದ್ರಿಕಾ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ರಾಜಕೇಸರಿ ಸಂಘಟನೆ ವಿಶೇಷ ರೀತಿಯಲ್ಲಿ ನೆರವಾಗಿದೆ.
ಸಂಘಟನೆಯ ಸದಸ್ಯರು ಜು.12 ರಂದು ಸಂತ್ರಸ್ತರ ಮನೆಗೇ ಬೇಟಿನೀಡಿ ಧೈರ್ಯ ತುಂಬಿದ್ದೂ ಮಾತ್ರವಲ್ಲದೆ 25 ಕೆ.ಜಿ ಅಕ್ಕಿ, ದಿನಸಿ ಸಾಮಾಗ್ರಿಗಳು,2 ಸಾವಿರ ರೂ. ನಗದು ಕೂಡ ಹಸ್ತಾಂತರ ಮಾಡಿದೆ. ಕುಟುಂಬದ ಸದಸ್ಯೆ ಕೊರೊನಾದಿಂದ ಕೂಲಿ ಮಾಡಲಾಗದೆ ಸಂಕಷ್ಟಕ್ಕೆ ಗುರಿಯಾಗಿದ್ದರೆ, ಮನೆಯಲ್ಲಿ ವೃದ್ಧೆ ತಾಯಿ ಇದ್ದಾರೆ. ಪತಿ ಚಾಲಕರಾಗಿದ್ದರೂ ಸೀಲ್ ಡೌನ್ ಕಾರಣದಿಂದ ಕೂಲಿ ಮಾಡಲಾಗದೆ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದರು.
ಅಖಿಲ ಕರ್ನಾಟಕ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಅವರ ನೇತೃತ್ವದಲ್ಲಿ ಬಂದ ನಿಯೋಗದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಕಾರ್ತಿಕ್, ಕಾರ್ಯದರ್ಶಿ ಅನಿಲ್, ಉಜಿರೆ ಘಟಕದ ಸಂಚಾಲಕ ಪ್ರವೀಣ್, ಕಾರ್ಯತ್ತಡ್ಕ ಘಟಕ ಸಾಮಾಜಿಕ ಜಾಲತಾಣದ ಸುಮಂತ್, ಹಾಗೂ ಸದಸ್ಯರಾದ ಶರಣ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ರವಿವಾರದ ಲಾಕ್ ಡೌನ್ ವೇಳೆಯೂ ವಿಶ್ರಾಂತಿ ಪಡೆಯದ ಸಂಘಟನೆ ಸದಸ್ಯರು ಯಾರೂ ಗುರುತಿಸದ ಈ ಕುಟುಂಬಕ್ಕೆ ನೆರವಾಗುವ ಮೂಲಕ ಮಾದರಿ ಮೆರೆದಿದ್ದಾರೆ.