ಗುರುವಾಯನಕೆರೆ: ತಾಯಿಯ ಹೆಸರಿನಲ್ಲಿದ್ದ ಜಮೀನು ದಾಖಲೆಯನ್ನು ವರ್ಗಾವಣೆ ಮಾಡುವುದಕ್ಕೆಂದು ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ಭ್ರಷ್ಟಾಚಾರ ಗ್ರಹ ದಳದ ಬಲೆಗೆ ಬಿದ್ದ ಘಟನೆ ಜೂ.3 ರಂದು ನಡೆದಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಮ ಪಂಚಾಯತ್ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ, ಬೆಳ್ತಂಗಡಿಯಲ್ಲಿ ವಾಸ್ತವ್ಯವಿರುವ ಪ್ರೇಮ್ಸಿಂಗ್ ನಾಯಕ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಐತ್ತೂರು ಗ್ರಾಮದ ಶಾಹುಲ್ ಹಮೀದ್ ಎಂಬವರು ತನ್ನ ತಾಯಿಯ ಹೆಸರಿಂದ ತನ್ನ ಹೆಸರಿಗೆ 9-11 ವರ್ಗಾಯಿಸಲೆಂದು ಅರ್ಜಿ ಸಲ್ಲಿಸಿದ್ದು, ಈ ವೇಳೆ ಪ್ರೇಮ್ ಸಿಂಗ್ರವರು ರೂ. 10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರೆನ್ನಲಾಗಿದೆ. ಅದರಂತೆ ಮೇ 21 ರಂದು ಶಾಹುಲ್ ಹಮೀದ್ರವರು 2 ಸಾವಿರ ರೂ.ಗಳನ್ನು ಕೈಯಲ್ಲಿ ಹಾಗೂ 8 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದು, ಪುನಃ 10 ಸಾವಿರ ಲಂಚಕ್ಕೆ ಪಿಡಿಓ ಬೇಡಿಕೆ ಇರಿಸಿದಾಗ ಶಾಹುಲ್ ಹಮೀದ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಅದರಂತೆ ಜೂ.3ರಂದು ಬೆಳಿಗ್ಗೆ ಶಾಹುಲ್ ಹಮೀದ್ ಒಂದು ಸಾವಿರ ರೂ.ಗಳನ್ನು ಪ್ರೇಮ್ಸಿಂಗ್ಗೆ ನೀಡಿದ್ದು, ಸಂಜೆ ವೇಳೆಗೆ ಗುರುವಾಯನಕೆರೆ ಜಂಕ್ಷನ್ನಲ್ಲಿ ಬಾಕಿ 9 ಸಾವಿರ ರೂ.ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಮಂಜುನಾಥ್ ಕೌರಿ, ಇನ್ಸ್ಪೆಕ್ಟರ್ಗಳಾದ ಮೋಹನ್ ಕೊಠಾರಿ, ಯೋಗೀಶ್ ಕುಮಾರ್, ಉಡುಪಿಯ ಇನ್ಸ್ಪೆಕ್ಟರ್ಗಳಾದ ಸತೀಶ್, ಜಯರಾಂ ಗೌಡ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.