ದೈವಾರಾಧನೆಯ ಮೂಲ ಸ್ಥಿತಿಯಿಂದ ನಾವೀಗ ಹೊರಗೆ ಬಂದಿದ್ದೇವೆ. ಹಿಂದೆ ದೈವಕ್ಕೆ ಪಾಲೆದ (ಅಡಿಕೆ ಹಾಳೆಯ) ಮೊಗವಿದ್ದರೆ, ಬಂಗಾರದಂತಹ ಮನಸ್ಸು ಜನರಲ್ಲಿತ್ತು. ಆದರೆ ಈಗ ತದ್ವಿರುದ್ಧವಾಗಿ ಬಂಗಾರದ ಮೊಗವಿದೆ, ಪಾಲೆಯಂತಹ ಮನಸ್ಸು ನಿರ್ಮಾಣವಾಗಿದೆ.
– ಪ್ರೊ. ತುಕಾರಾಮ್
ಬೆಳ್ತಂಗಡಿ: ದೈವಾರಾಧನೆಯನ್ನು ಮೂಲ ಸ್ವರೂಪಕ್ಕೆ, ಸಿದ್ದಾಂತಕ್ಕೆ ಧಕ್ಕೆ ಬಾರದಂತೆ ಹಿರಿಯರ ನಂಬಿಕೆಯಂತೆ ನಡೆಸಿಕೊಂಡು ಬರಬೇಕೇ ಹೊರತು ಆಡಂಬರಕ್ಕೆ ಪ್ರಾಧಾನ್ಯತೆ ನೀಡುವುದು ಸರಿಯಲ್ಲ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ. ತುಕಾರಾಮ್ ಪೂಜಾರಿ ಹೇಳಿದರು.
ಅವರು ಬಳಂಜ, ನಾಲ್ಕೂರು, ಬಡಗಕಾರಂದೂರು ಗ್ರಾಮದ ಮುಜ್ಕಾನ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಆನೆಪಿಲದ ಆಲಯ ಸಮರ್ಪಣೆ, ಮಂಚ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ನೇಮೋತ್ಸವ ಸಂದರ್ಭ ಮಾ.11 ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ತುಳುನಾಡಿನ ದೈವ ಆರಾಧನೆ ಎಂಬ ವಿಚಾರದಲ್ಲಿ ಧಾರ್ಮಿಕ ಪ್ರವಚನ ನೀಡಿದರು.
ತುಳು ನಾಡು ಎಂಬುದು ಸರ್ವ ಜನಾಂಗದ, ಸಂಸ್ಕೃತಿಯ ಸಂಗ್ರಹಾಲಯ ವಿದ್ದಂತೆ. ದೈವಾರಾಧನೆ, ಭೂತಾರಾಧನೆ ಎಂಬುದು ಕೃಷಿಗೆ ನೇರವಾಗಿ ಸಂಬಂಧ ಹೊಂದಿರುವಂತಹದು ಮತ್ತು ಜೀವನ ಕ್ರಮವೇ ಆಗಿದೆ. ಆದರೆ ಇತ್ತೀಚಿನ ದಿನಗಳಿಂದ ಅದರ ಪಾವಿತ್ರ್ಯತೆ ನಾಶವಾಗುತ್ತಾ ಹೋಗಿ ಆಡಂಬರವೇ ಹೆಚ್ಚಾಗುತ್ತಿದೆ ಮೂಲ ಸ್ವರೂಪ ಮಾಯವಾಗುತ್ತಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಈಶ ಸಮೂಹ ಸಂಸ್ಥೆ ನಿರ್ದೇಶಕ ಡಾ| ಎನ್. ಕಿಶೋರ್ ಆಳ್ವ ಅವರು ದೈವರಾಧಾನೆ ಸಂದರ್ಭ ಇಲ್ಲಿನ ಸುತ್ತಲಿನ ಜನರು ಸೇರಿ ಏಕ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಇದು ಸ್ವಸ್ಥ ಸಮಾಜದ ಲಕ್ಷಣವನ್ನು ತೋರಿಸುತ್ತದೆ. ದೈವಾರಾಧನೆಗೂ ಪ್ರಾಮಾಣಿಕತೆಗೂ ಸಂಬಂಧವಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ವಹಿಸಿದ್ದರು. ವೇದಿಕೆಯಲ್ಲಿ ಎಸ್ಕೆಡಿಆರ್ಡಿಪಿ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯ ವಿನುಷಾ ಪ್ರಕಾಶ್, ಬಳಂಜ ಗ್ರಾ.ಪಂ. ಅಧ್ಯಕ್ಷೆ ದೇವಕಿ, ಡಾ| ಎನ್.ಎಮ್. ತುಳುಪುಳೆ ಉಪಸ್ಥಿತರಿದ್ದರು.
ಸಮಿತಿ ಉಪಾಧ್ಯಕ್ಷ ವಿಜಯಕುಮಾರ್ ಜೈನ್ ಆರಂತಬೈಲು ಗುತ್ತು, ಜಗತ್ಪಾಲ ಜೈನ್ ಪಾಲ್ಯಗುತ್ತು, ಸೀತಾ ರಾಮ ಪೂಜಾರಿ ಡೆಪ್ಪುಣಿ, ವಿಠಲ ಪೂಜಾರಿ ಕೆಂಪುಂರ್ಜ, ರಮಾನಂದ ಪೂಜಾರಿ ಯೈಕುರಿ, ಸದಾನಂದ ಪೂಜಾರಿ ಅಂತರ, ಕಾರ್ಯದರ್ಶಿಗಳಾದ ದಿನೇಶ್ ಪೂಜಾರಿ ಅಂತರ, ಕುದ್ರೊಟ್ಟು ದಿನೇಶ್ ಪೂಜಾರಿ, ಸತೀಶ್ ಕೆ. ಬರೆಮೇಲು, ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ಯೈಕುರಿ, ಜೊತೆ ಕಾರ್ಯದರ್ಶಿ ಮಂಜುಳಾ, ಸಂಜೀವ ಮತ್ತಿತರರು ಉಪಸ್ಥಿತರಿ ದ್ದರು. ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಅಜಿತ್ಕುಮಾರ್ ಹೇರಗುತ್ತು ಹಾಗೂ ಚೀಂಕ್ರ ಮೂಲ್ಯ ಇವರನ್ನು ಸಮ್ಮಾನಿಸಲಾಯಿತಲ್ಲದೆ ದೈವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವಿಭಾಗದವರನ್ನು ಗುರುತಿಸಲಾಯಿತು. ಬಳಿಕ ದೈವದ ನೇಮೋತ್ಸವ ನೆರವೇರಿತು. ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕಲ್ಮಂಜ ವಂದಿಸಿದರು. ವಿಜಯಕುಮಾರ್ ಜೈನ್ ನಾವರ ಕಾರ್ಯಕ್ರಮ ನಿರ್ವಹಿಸಿದರು.